ವಿನು ಮಂಜು ಮಲ್ನಾಡ್🌹   (✍️ವಿನು ಮಂಜು ತೀರ್ಥಹಳ್ಳಿ❣️)
685 Followers · 435 Following

read more
Joined 19 December 2019


read more
Joined 19 December 2019

ಅಂಗಳದ ತುಂಬೆಲ್ಲಾ ಈಗಷ್ಟೇ
ಬಿರಿದ ಸೂಜಿ ಮಲ್ಲಿಗೆಯ ಘಮಲು,
ನಿನ್ನ ನೆನೆಯುವ ನೆನಪಿಗೂ
ಇಂದೇತಕೋ ತುಸು ಹೆಚ್ಚೇ ಅಮಲು..
ಎಂದು ಬರುವೆ ಹೇಳು ಗೆಳೆಯಾ
ಮುಂಗುರುಳ ಸರಿಸಿ ಮುದ್ದಿಸಲು..
ನೀ ಬರುವ ದಾರಿಗಾಗಿ
ರೆಪ್ಪೆ ಮುಚ್ಚದೆ ಕಾಯುತ್ತಿವೆ
ನನ್ನೀ ಕಣ್ಣುಗಳು.. ✍️ವಿನು...🌹

-



ನನ್ನೊಂದಿಗೆ ಜೊತೆಯಾಗಿ
ಅದ್ಯಾರೇ ಇದ್ದರೂ
ನೀನಿರದ ನೋವೊಂದು
ಎದೆಯೊಳಗೆ ಜೀವಂತ,
ಬದುಕಿಗೆ ಜೊತೆಯಾಗಿ ಇನ್ಯಾರೇ
ಬಂದರೂ, ನಿನ್ನುಳಿಸಿಕೊಳ್ಳಲಾಗದ
ಕೊರಗೊಂದು ಉಸಿರೊಳಗೆ ಶಾಶ್ವತ..
ಮನಸ್ಸು ಚಂಚಲವಂತೆ ನಿಜ,
ಅದು ಒಮ್ಮೆ ಇದ್ದಂತೆ ಮತ್ತೊಮ್ಮೆ
ಇರುವುದಿಲ್ಲವೆನ್ನುವುದೂ ಸಹಜ,
ಆದರೆ ನನ್ನ ನೆನಪಲ್ಲಿ ನಿನ್ನ ಸರದಿ
ಬಂದಾಗ ಅದೆಂದೂ ತನ್ನ ಚಂಚಲತೆ
ತೋರಿಲ್ಲ, ಯಾಕೆಂದರೆ ಇಂದಿಗೂ
ಅದು ನಿನ್ನ ಪ್ರೀತಿಸುವುದನ್ನು
ಮರೆತಿಲ್ಲ, ಮತ್ತೆ ಎಂದಾದರೊಮ್ಮೆ ನೀ
ಸಿಕ್ಕೇ ಸಿಗಬಹುದೆನ್ನುವ ನಂಬಿಕೆಯಲಿ
ಹೃದಯ ನಿನಗಾಗಿ ಕಾಯುವುದನ್ನು
ಇನ್ನೂ ನಿಲ್ಲಿಸಿಲ್ಲ.. ವಿನು...🌹

-



ಕೇಳಿದ್ದನ್ನು ವರವಾಗಿ ಕೊಟ್ಟವಳು
ಬಯಸಿದ್ದನ್ನು ಜೊತೆಯಲ್ಲೇ ಇಟ್ಟವಳು
ಕಷ್ಟಗಳಿಗೆ ಪರಿಹಾರವಾಗಿ ನಿಂತವಳು
ಸದಾ ಕಾಲ ಕೈ ಹಿಡಿದು ಕಾಪಾಡಿದವಳು..

ಬೇಡಿದ್ದನ್ನು ಇಲ್ಲವೆನ್ನದೇ ನೀಡಿದವಳು
ಕೋರಿದ್ದನ್ನು ಕಣ್ಣೆದುರೇ ತಂದಿಟ್ಟವಳು
ಬಾಳಿಗೆ ಭರವಸೆಯ ಬೆಳಕಿವಳು,
ನಾನಿಟ್ಟ ನಂಬಿಕೆ ಮತ್ತೊಂದು ಹೆಸರಿವಳು..

ಮನಸ್ಸು ಮಗುವಂತೆ ಬಿಕ್ಕುವಾಗ
ಸಾಂತ್ವನದ ನೆಮ್ಮದಿಯ ಮಡಿಲಾದವಳು
ಹೆಜ್ಜೆ ಭಾರವೆನಿಸಿ ದಿಕ್ಕು ಕಾಣದೇ ಕುಸಿದಾಗ
ಕೈ ಹಿಡಿದು ಮುನ್ನಡೆಸಿದವಳು,
ನನ್ನುಸಿರುಸಿರಲ್ಲಿಯೂ ನೆಲೆ ನಿಂತವಳು
ನನ್ನಾರಾಧ್ಯ ದೇವಿಯಿವಳು.. ವಿನು...🌹

-



ಸಿಕ್ಕ ಗೆಲುವನ್ನು ಅತಿಯಾಗಿ
ತಲೆಗೇರಿಸಿಕೊಳ್ಳದಿರೋಣ,
ಇನ್ಯಾವುದೋ ಸೋಲೊಂದು
ನಮ್ಮ ಭೇಟಿಗೆ ಸಿದ್ಧತೆ
ನಡೆಸುತ್ತಿರಲೂಬಹುದು..

ಗತಿಸಿದ ಕಹಿ ಘಟನೆಗಳನ್ನೇ
ಮೆಲುಕು ಹಾಕುತ್ತಾ ನೆಮ್ಮದಿ
ಕೆಡಿಸಿಕೊಳ್ಳದಿರೋಣ,
ಬಯಸದೇ ಬರುವ ಭಾಗ್ಯವೊಂದು
ನಮ್ಮ ದಾರಿಯನು ಕಾಯುತ್ತಾ
ಕುಳಿತಿರಲೂಬಹುದು..

ನೊಂದವರ ನೋವಿಗೆ ಸ್ಪಂದಿಸುವ
ಗುಣವನ್ನು ಬೆಳೆಸಿಕೊಳ್ಳೋಣ,
ನಮ್ಮ ಕಷ್ಟಗಳಿಗಂತಲೇ ದೇವರು
ಇನ್ಯಾರದ್ದೋ ಹೆಗಲನ್ನು ನಮಗಾಗಿ
ಸಿದ್ಧವಿಟ್ಟಿರಲೂಬಹುದು.. ವಿನು...🌹

-




ಮೋಸದಿಂದ ಗೆದ್ದೇ ಎಂದು ಬೀಗಬೇಡ,
ನಿನ್ನ ಕರ್ಮ ಸಮಯವೊಂದನ್ನು
ಕಾದು ಕುಳಿತಿರುವುದು,
ಸ್ವಾರ್ಥದಿಂದ ಸಾಧಿಸಿದೇ ಎಂದು
ಹೆಮ್ಮೆ ಪಡಬೇಡ,ಆ ಸ್ವಾರ್ಥವೇ ನಿನ್ನ
ಬಲಿಗಾಗಿ ಹೊಂಚು ಹಾಕುತ್ತಿರುವುದು..
ಹಠದಿಂದ ಪಡೆದುಕೊಂಡೇ ಎಂದು
ನಿಟ್ಟುಸಿರು ಬಿಡಬೇಡ, ಬಿಸಿಯುಸಿರಿನ
ತಾಪವೂ ತಟ್ಟದೇ ಇರಲಾರದು..
ಬುದ್ಧಿವಂತಿಕೆಯಿಂದ ಸಂದರ್ಭವನ್ನೇ
ಬದಲಿಸಿಬಿಟ್ಟೆಯೆಂದು ಒಳಗೊಳಗೇ
ಸಂಭ್ರಮ ಪಡಬೇಡ,
ಆ ಸಂಭ್ರಮವೇ ಸಂತಾಪವಾಗುವ
ದಿನ ತುಂಬಾ ದೂರವಿರಲಾರದು..
ನಿಂದಿಸಿ,ಕಣ್ಣೀರು ಹಾಕಿಸಿಯೇ ಬಿಟ್ಟೆ
ಎಂದು ಸಂತೋಷಪಡದಿರು,
ಹಾಕಿಸಿದ ಒಂದೊಂದೂ ಕಣ್ಣಹನಿಯ
ಬಿಸಿಯೂ ನಿನ್ನನ್ನು ನೆಮ್ಮದಿಯಾಗಿರಲು
ಖಂಡಿತಾ ಬಿಡಲಾರದು..
ನೀ ಕೊಟ್ಟದ್ದೇ ನಿನಗೆ ದುಪ್ಪಟ್ಟಾಗಿ
ನಿನ್ನ ಹುಡುಕಿ ಬಂದೇ ಬರುವುದು,
ಅದು ಪ್ರೀತಿಯಾದರೂ ಸರೀ,
ದ್ವೇಷವಾದರೂ ಸರೀ.. ನಗುವಾದರೂ
ಸರಿ, ನೋವಾದರೂ ಸರಿ.. ವಿನು...🌹

-



ಅಕ್ಷರಗಳ ಜೊತೆ ಅನುರಾಗವಾಗಿದ್ದೇ,
ನಿನ್ನ ನೋಟದಿಂದ..
ಪದಗಳ ಜೊತೆ ಪ್ರೀತಿಯಾಗಿದ್ದೇ,
ನಿನ್ನ ನಗುವಿನಿಂದ..
ಸಾಲುಗಳ ಜೊತೆ ಸಲುಗೆಯಾಗಿದ್ದೇ,
ನಿನ್ನ ಮಾತಿನಿಂದ..
ಕವಿತೆಗಳ ಜೊತೆ ಒಲವಾಗಿದ್ದೇ,
ನಿನ್ನ ನೆನಪಿನಿಂದ..
ಬರೆದ ಬರಹಗಳಿಗೆ ಮೆರುಗು
ಬಂದಿದ್ದೇ ನೀ ನನಗೆನ್ನುವ
ಒಣ ಜಂಭದಿಂದ.. ವಿನು...🌹

-



ಯಾರಿಗೂ ಕೇಡು ಬಯಸದೇ
ಬದುಕುತ್ತಿದ್ದರೂ ಜನ ವೈರಿಗಳ
ಸ್ಥಾನದಲ್ಲಿ ನಿಲ್ಲಿಸಿಬಿಡುತ್ತಾರೆ..

ಸರಿಯಾದ ದಾರಿಯಲ್ಲಿ
ನಡೆಯುತ್ತಿದ್ದರೂ ತಪ್ಪು ಹೆಜ್ಜೆಯನ್ನೇ
ಹುಡುಕುವುದರಲ್ಲೇ ನಿರತರಾಗಿರುತ್ತಾರೆ..

ಸ್ವಾಭಿಮಾನದಿಂದ ಸುಮ್ಮನಿದ್ದರೂ
ಅವಮಾನ ಮಾಡುವುದು ಹೇಗೆಂದು
ಯೋಚಿಸುತ್ತಿರುತ್ತಾರೆ..
ಅವರ ದೃಷ್ಟಿಕೋನಕ್ಕೆ ತಕ್ಕಂತೆಯೇ
ನಮ್ಮನ್ನು ಅಳೆದು ತೂಗಿಬಿಡುತ್ತಾರೆ..

ಯಾರ ಬಾಯಿಗೂ ಬೀಳದೇ,
ಯಾರ ಕೆಂಗಣ್ಣಿಗೂ ಗುರಿಯಾಗದೇ
ಜೀವಿಸುವುದು ನಿಜವಾಗಿಯೂ ಕಷ್ಟಸಾಧ್ಯ..

ಹಾಗಾಗಿ ಪರರ ಮೆಚ್ಚಿಸುವ ಚಿಂತೆ
ನಮಗೇಕೆ..? ಯಾರು ಮೆಚ್ಚಲಿ,ಬಿಡಲಿ..
ಎಲ್ಲವನು ಅರಿತಿರುವ ಪರಮಾತ್ಮ ಮೆಚ್ಚುವಂತೆ,
ನಮ್ಮಂತರಾತ್ಮ ಒಪ್ಪುವಂತೆ ಬದುಕಿಬಿಟ್ಟರೆ
ಈ ಜೀವನ ಸಾರ್ಥಕವಲ್ಲವೇ.. ವಿನು...🌹

-



ಎರಡು ಹೃದಯಗಳ ಭಾವನೆಗಳು ಒಂದೇ ರೀತಿಯದ್ದಾದರೆ ಮಾತ್ರವೇ ಅದು ಪ್ರೀತಿಯೆನಿಸಿಕೊಳ್ಳುತ್ತೆ,ಇಲ್ಲವಾದರೆ ಬಲವಂತವೆನಿಸಿಕೊಳ್ಳುತ್ತೆ.ಎದೆಗೂಡಲ್ಲಿ ಕನಸಿನ ಮಹಲನ್ನು ನಿರ್ಮಿಸುವ ಮೊದಲು ಆಗಬಹುದಾದ ನೋವುನಲಿವುಗಳ ಅರಿವೂ ಇರಲಿ.ಕಾಡಿಸಿ ಪೀಡಿಸಿ ಪಡೆದುಕೊಳ್ಳಲೇಬೇಕೆಂಬ ಹಠದಲ್ಲಿ ಅವರಿಗೂ
ಹಿಂಸಿಸುವುದಲ್ಲ ಪ್ರೇಮವೆಂದರೆ.ಹಾಗಂತ ಪ್ರೀತಿಯಲ್ಲಿ
ನೋವುನಲಿವುಗಳೆಲ್ಲ ಇಲ್ಲವೆಂದಲ್ಲ,ಖಂಡಿತವಾಗಿಯೂ ಇದೆ,
ಆದರೆ ಎಷ್ಟರಮಟ್ಟಿಗೆ ಇರಬೇಕಿತ್ತೆನ್ನುವುದನ್ನು ಅರಿತಾಗಲೇ ನಮ್ಮ ನಡುವಲ್ಲಿ
ಇರುವ ಪ್ರೀತಿ ನಿಜವಾದುದ್ದಾ ಅಥವಾ ಅಲ್ಲವಾ
ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ.
ಪರಸ್ಪರ ಎರಡೂ ಮನಸ್ಸಿನ ಕಡೆಯಿಂದ ಸ್ಪಂದನೆ ಇದ್ದರೆ
ಮಾತ್ರವೇ ಆ ಪ್ರೀತಿಗೊಂದು ನಿಜವಾದ ಅರ್ಥ,
ಇಲ್ಲವಾದಲ್ಲಿ ಆ ಪ್ರೀತಿಗೆ ಸಿಗಬಹುದು ನಾನಾ ಅಪಾರ್ಥ.ಪ್ರೀತಿಯೆಂದರೆ ಒತ್ತಾಯಪೂರ್ವಕವಾಗಿ ದಕ್ಕಿಸಿಕೊಳ್ಳುವುದಲ್ಲ, ಹೃದಯಪೂರ್ವಕವಾಗಿ
ಒಬ್ಬರಿಗೊಬ್ಬರು ಅರ್ಪಿಸಿಕೊಳ್ಳುವಂಥದ್ದು.ನಿಜವಾದ ಪ್ರೀತಿ
ಸಿಕ್ಕರೆ ಕಷ್ಟಪಟ್ಟಾದರೂ ಉಳಿಸಿಕೊಳ್ಳಿ, ಸಿಗಲಿಲ್ಲವೆಂದಾದರೆ ಅವರಿಗೆ ಯಾವುದೇ ಕಾರಣಕ್ಕೂ ಕೇಡು ಬಯಸದೇ ಅವರೊಳಿತನ್ನಷ್ಟೇ
ಬಯಸಿ ದೂರವಿದ್ದುಬಿಡಿ.ಎಂದಾದಾದರೊಮ್ಮೆ ಸಿಕ್ಕೇ ಸಿಗುವರೆನ್ನುವ ಭರವಸೆ ಬಲವಾಗಿದ್ದರೆ ಮಾತ್ರ ಅವರಿಗಾಗಿ ಕಾದಿರಿ,ಆಗ ಮಾತ್ರ
ಕಾಯುವುದಕ್ಕೂ ಒಂದು ಅರ್ಥವಿರುತ್ತದೆ.
ಇಲ್ಲವಾದಲ್ಲಿ ಕಾಯುವುದು ಬರೀ ವ್ಯರ್ಥ ಪ್ರಯತ್ನವಾಗಿಯೇ ಉಳಿದುಬಿಡುತ್ತೆ.
ಪ್ರೀತಿಯೆಂದರೆ ಬರೀ ಪಡೆದುಕೊಳ್ಳುವುದಷ್ಟೇ ಅಲ್ಲ.
ಬಿಟ್ಟುಕೊಡುವುದೂ ಒಂದು ಪ್ರೇಮವೇ. ವ್ಯಾಮೋಹಕ್ಕೊಳಗಾಗದೇ ಬದುಕಿಬಿಡಿ.
ಮಾನಸಿಕ ನೆಮ್ಮದಿಗಾದರೂ ಅಂತಹ ಬಂಧಗಳಿಂದ ದೂರವಿದ್ದುಬಿಡಿ.
ತ್ಯಾಗಿಯಾದೆಯೆಂದು ಸಂತಸಪಡಿ.🌹ಹ್ಯಾಪಿ ವ್ಯಾಲೆಂಟೈನ್ಸ್ ಡೇ🌹

-



ಮನಸ್ಸು ಸ್ವಚಂದವಾಗಿದ್ದರೆ
ಮಾತ್ರವೇ ನಾವು ನೋಡೋ
ಪ್ರತಿಯೊಂದರಲ್ಲಿಯೂ
ಒಳ್ಳೆಯದನ್ನೇ ಹುಡುಕಲು ಸಾಧ್ಯ,
ಹೃದಯ ಹಕ್ಕಿಯಂತೆ ಆಗಸದೆತ್ತರಕ್ಕೆ
ಹಾರಲು ಸಾಧ್ಯ.
ಮನಸ್ಸಿನ ತುಂಬಾ ಕಲ್ಮಶವೇ
ತುಂಬಿಕೊಂಡಿದ್ದರೆ ಒಳ್ಳೆಯದರಲ್ಲೂ
ಕೂಡ ಹುಳುಕನ್ನು ಮಾತ್ರವೇ
ಕಾಣಲು ಸಾಧ್ಯ, ನೆಮ್ಮದಿಯ
ಬದುಕನ್ನು ಜೀವಿಸಲು ಅಸಾಧ್ಯ..
ಹಾಗಾಗಿ ಮೊದಲು ಮನಸ್ಸು
ಸ್ವಚ್ಛವಾಗಿರಲಿ, ಆಲೋಚನೆಗಳು
ಉಚ್ಛವಾಗಿರಲಿ.. ವಿನು...🌹

-



ನೆನಪಿನ ತೇರಲ್ಲಿ ನಿನ್ನೊಡನೆ
ಸವಾರಿ ಹೊರಟಿದ್ದೆ,
ನಡುದಾರಿಯಲ್ಲಿ ಬಿಟ್ಟು
ಹೊರಟ ನಿನ್ನನ್ನು ನೆನೆದು
ನಾ ಏಕಾಂಗಿಯಾಗಿ
ಕಣ್ಣೀರು ಸುರಿಸಿದ್ದೆ..
ಖಾಲಿ ಹಾಳೆಯ ತುಂಬಾ
ಕವಿತೆಯ ಸಾಲುಗಳ
ಬರೆಯಲು ಹೊರಟಿದ್ದೆ,
ಆದರೆ ನನಗೇ ಗೊತ್ತಿಲ್ಲದಂತೆ
ಪುಟಗಳ ತುಂಬೆಲ್ಲಾ ಬರೀ
ನಿನ್ಹೆಸರನ್ನೇ ಗೀಚಿದ್ದೆ.. ವಿನು...🌹

-


Fetching ವಿನು ಮಂಜು ಮಲ್ನಾಡ್🌹 Quotes