ಭಾಷೆಯೆಂದರೆನಗೆ
ಬರೀ ಬಾಯಿಮಾತಲ್ಲ
ಅದು ಹೇಳತೀರದ,
ಅದೆಂದೂ ತೀರದ
ಪುಣ್ಯಭಾವ ಸುಧೆಯು!
ಅದೊಂದೇ ಈತನಕದ ಪ್ರೀತಿ
ನನ್ನನತೀ ಸೆಳೆದು
ನನ್ನಾಳದಿ ಬೇರುಬಿಟ್ಟ
ಬೆಳಕೆಂಬ ಪ್ರತೀತಿ!
ಜೀವಕ್ಕಲ್ಲದೀ ಜೀವನಕ್ಕೂ
ಸುತ್ತಲೂ ಬಳಸಿ ತಬ್ಬಿದ್ದೇನೀಗಂತೂ
ಅದರಮರಾನುರಾಗವದು
ಹಬ್ಬಿಕೊಂಡಿದೆ ಕಣ ಕಣವನು,
ಹಬ್ಬದಬ್ಬರದಂತೆನ್ನ
ಎದೆಯುಬ್ಬರದೇರಿಳಿತವನೂ!-
ಇದು ಕನ್ನಡದ , ಕನ್ನಡಿಗರ ಹಬ್ಬ... ನಿಮಗಲ್ಲದಿದ್ದರೂ ಇನ್ಯಾರಿಗೋ ಅದು ಒಂದು ವಿಶೇಷ ಸಂಭ್ರಮ, ಸಡಗರ ಮತ್ತೆ ಕೆಲವರಿಗೆ ಅದೇ ಬದುಕು... ಅಂಥ ಸಂಭ್ರಮವನ್ನ, ಅಂಥ ಬದುಕೆಂಬ ಬದುಕನ್ನ ಮತ್ತದರ ಸೂಕ್ಷ್ಮ ಭಾವ-ಸಂವೇದನೆಯನ್ನ ನಿಮ್ಮ ಕೈಯಲ್ಲಾದರೆ ಗೌರವಿಸಿ, ಪ್ರೋತ್ಸಾಹಿಸಿ, ಕನಿಷ್ಠ ಪಕ್ಷ ಪ್ರೀತಿಯಿಂದ ಕಾಣಿ... ಇದ್ಯಾವುದೂ ಆಗದಿದ್ದಲ್ಲಿ ಈ ಎಲ್ಲದರಿಂದ ಮತ್ತು ಎಲ್ಲರಿಂದ ದೂರ ಉಳಿದುಬಿಡಿ... ನಿಮ್ಮ ನಿಮ್ಮ ತೋರಿಕೆಯ ಪ್ರತಿಷ್ಠೆ ಮತ್ತು ಮಾಡ್ಬೇಕು ಮಾಡುತ್ತಿದ್ದೇವೆ , ಮಾಡಿದ್ದೇವೆ ಎನ್ನುವ ನಿಮ್ಮ ನಿಮ್ಮ ತೀರಾ ಕಾಟಾಚಾರದ ಕಿರಿಕಿರಿಯ ಅಜ್ಞಾತನುಭವದ ಅಂಧವೇದನೆಯ ಕಂದಕಕ್ಕೆ ಮುಗ್ಧ ಕನ್ನಡ ಮನಸುಗಳನು ಬಲಿಗೊಡದಿರಿ...
ನಾಡೆಂದರೆ ಬರೀ ಮಣ್ಣಲ್ಲ,
ಅದೆಮ್ಮ ಅಸ್ತಿತ್ವವು
ನುಡಿಯೆಂದರೆ ಬರೀ ಮಾತಲ್ಲ,
ಅದಂತರಂಗದ ಅಸ್ಮಿತೆಯು...
ನಮ್ಮ-ನಿಮ್ಮ ಮನೆಗಳ ಹಬ್ಬ
ಸಂಭ್ರಮಗಳಂತೆಯೇ ಇದನೂ ಕಾಣಿ,
ಬರೀ ನುಡಿಯಲ್ಲವಿದು
ಆತ್ಮಾನುವಾದದ ಭ್ರಹ್ಮವಾಣಿ!-
ಅಪ್ಪ!
ಸ್ವಚ್ಛ ಕೋಪದ ಸಣ್ಣ ಪ್ರತಿಮೆ
ಹೆಚ್ಚೆಚ್ಚು ಅಂತರ್ಮುಖಿ
ಜೋರು ಮಾತು,
ನೂರು ಮುನಿಸುಗಳನ್ನೆಲ್ಲಾ
ಗುತ್ತಿಗೆ ಪಡೆದಿದ್ದ
ಸಾಧಾರಣಗಳೊಳಗೊಬ್ಬ ಸಾಧು!
ಜೀವನದಲ್ಲಿ,
ಏನೇ ಆದರೂ ತನ್ನಿಂದ
ಬೇರಾರೂ ನೋಯಬಾರದು
ಬೇರಾರಿಗೂ ನೋವಾಗಬಾರದು
ಎಂಬ ಮುಗ್ಧ ಸಿದ್ಧಾಂತ!
ಅತೀ ಪ್ರೀತಿ ಅಷ್ಟಕ್ಕಷ್ಟೇ
ಬೆಳಕಿನೆದುರೆದುರಿಗೆ..
ಕತ್ತಲೆಂಬ ಹಿಮ್ಮುಖದ ಬೆನ್ನ ಮೇಲೆ
ಬೇರಾರೂ ಹೊರಲಾದಷ್ಟು ಪ್ರೇಮದೊರೆ!
ಏನಿರಲಿ ಇಲ್ಲದಿರಲಿ
ಎಲ್ಲಕ್ಕೂ ಮೇಲೊಬ್ಬನ ಸಾಕ್ಷಿ ಇಟ್ಟು
ಮತ್ತೆ, ಪಾಪ ಪುಣ್ಯಗಳೆಲ್ಲಕ್ಕೂ
ಪದೇಪದೇ ಅವನಷ್ಟೇ ಸಾಕು
ಇದಿಷ್ಟವನ ಧ್ಯೇಯ
ಮತ್ತಿದೇ ಬದುಕು!-
ಕತ್ತೆತ್ತಿ ನೋಡಲು ಎತ್ತೆತ್ತಲೂ ಕತ್ತಲೇ ನನ್ನವ್ವ
ಕಾಡ ನಡುವಣದ ಕಕ್ಕಾಬಿಕ್ಕಿ ಎದುರೆದುರು
ಮುತ್ತಾಗಿಸಬೇಡ ಮತ್ತೆ ಮತ್ತೆ ಅರೆಗಣ್ಣುಗಳ
ಸುಖಗಾಣದ ಸುಕ್ಕು ಕೆನ್ನೆಗಳವು
ಮುಕ್ಕಾದಾವು ಬಿಸಿನೀರ ಮರೆಯಲ್ಲೆ!
ಎಲ್ಲಾ ಕಡುಕಷ್ಟಗಳನೊಟ್ಟುಗೂಡಿ ಸುಟ್ಟುಬಿಡುವ
ಆ ದಿನ ಬಂದಾತು ಮುಂದೊಮ್ಮೆ
ಮಾತು ಮಾತಿಗೂ ಬಿಕ್ಕಳಿಸಬೇಡೇ ನನ್ನವ್ವ
ತುತ್ತು ಅನ್ನಕ್ಕೂ ದಾರಿಬಿಡದೆ
ಕರುಳ ಗಂಟಾಗಿಸಿದೆ ಎದೆಗಂಟದ ದುಃಖ!
ದೂರದ ನಕ್ಷತ್ರದಾಸೆ ನಾ ತೋರಿಸಿಲ್ಲ
ಚಿಮುಣಿ ಬೆಳಕಾದರೂ ಹೊತ್ತು ತರುತೇನೇ ನನ್ನವ್ವ
ನಿನ್ನೊಳಗೆ ನಿನ್ನೆಯಿದ್ದ ಆ ಗಟ್ಟಿ ತನದ ಕಸುವ ನೀಡು
ಹೆಚ್ಚೇನು ಬ್ಯಾಡ ; ನೋಡು
ಎದಿಯೊಳಗೇನೂ ಮುಚ್ಚಿಡಬ್ಯಾಡ!-
ಏನೊಂದರಲ್ಲಿಯೂ,
ನೆಮ್ಮದಿಯಿದೆ ಎನಿಸುತ್ತಿಲ್ಲ ಇಲ್ಲಿ
ನನ್ನ ಹಸಿವನ್ನು, ಅನ್ನವನ್ನೂ;
ನನ್ನ ಧರ್ಮವನ್ನು, ಜಾತಿಯನ್ನೂ;
ನನ್ನ ನಂಬಿಕೆಯನ್ನು, ನನ್ನ ಭಕ್ತಿಯನ್ನೂ;
ನನ್ನ ನೆಲವನ್ನು, ಜಲವನ್ನೂ;
ನನ್ನ ನಾಡನ್ನು, ನುಡಿಯನ್ನೂ;
ಇನ್ನೂ ನನ್ನವೇ ಏನೇನನ್ನೋ
ರಾಜಕೀಯಕ್ಕಿಳಿಸಿದ್ದಾರೆ ಇಲ್ಲಿ
ಅವರವರ ಲಾಭನಷ್ಟಗಳ ತಕ್ಕಡಿಯಲ್ಲಿ!-
ನಿಜ, 'ಕನ್ನಡ ಮನಸಲ್ಲಿದ್ರೆ ಸಾಕಾಗಲ್ಲ'
ಮತಿಯ ಮಾತಾಗಬೇಕು ಮುತ್ತಾಗಬೇಕು
ಎದೆಯ ಪ್ರೀತಿಯಾಗಬೇಕು! ಕನ್ನಡ
ಹೃದಯ ಜ್ಯೋತಿಯಾಗಬೇಕು!
ನೀತಿಯಾಗಬೇಕು ನಿರ್ಭೀತಿಯಾಗಬೇಕು
ಹೊತ್ತೊತ್ತಿನ ತುತ್ತಾಗಬೇಕು, ಸ್ವತ್ತಾಗಬೇಕು
ಯಾವೊತ್ತಿನ ಗೊತ್ತಾಗಬೇಕು ಗತ್ತಾಗಬೇಕು! ಕನ್ನಡ
ಕೊರಳ ಕತ್ತಾಗಬೇಕು ಕತ್ತಲೊಳಗಿನ ಕಿಚ್ಚಾಗಬೇಕು!
ಅನ್ನವಾಗಬೇಕು ಚಿನ್ನವಾಗಬೇಕು
ಭಿನ್ನವೆಣಿಸದ ಅವಿಚ್ಛಿನ್ನವಾಗಬೇಕು
ಕಣ್ಣಾಗಬೇಕು ಕಪ್ಪು ಮಣ್ಣಾಗಬೇಕು! ಕನ್ನಡ
ಬಣ್ಣ ಬಣ್ಣದ ಭಾವಬೆಳಕಾಗಬೇಕು!-
ಬೆಳಕಾಗಬೇಕು, ಸುಡು ಸೂರ್ಯನಲ್ಲ
ಚಂದ್ರನಂಥ ತಂಬೆಳಕು
ಅದಕೆ ಇರುಳಾಗಬೇಕು, ತಿಳಿಯಾಗಸ ಬೇಕು
ಇರುಳಾಗುವ ತನಕ ಕಾಯಬೇಕು
ಕಾಯದೆಲ್ಲಾ ಮರುಳ ಮರೆಯಲಿರಸಬೇಕು!
ಮೌನವಾಗಿರಬೇಕು, ನಿಶ್ಯಬ್ದ ಮಸಣವಲ್ಲ
ಹರಿವ ತೊರೆಯಷ್ಟೇ ಗುನುಗಿನಿಂಪಿರಬೇಕು
ಅದಕೆ ನದಿಯಾಗಬೇಕು ನಿಧಾನಬೇಕು
ಆ ತನಕ, ನಿರಾಳಬೇಕು ನೀರಾಗಬೇಕು
ಬೇವುಬೆಲ್ಲಗಳ ಅಲ್ಲಗಳೆಯಬೇಕು!
ಮಾತಾಗಬೇಕು, ಮೊನಚು ಮುಳ್ಳಿನಂಥಲ್ಲ
ಮೃದುಲ ಮಧುರ ಮುತ್ತಿನಂತಿರಬೇಕು
ಹೋಲಿಕೆ ಚೊಕ್ಕ ಚುಕ್ಕಿಯಾಗಬೇಕು
ಅಂಥದಕೆ ತಿಳಿತಾಳ್ಮೆ ತಾಗಬೇಕು
ಸರಳ ಸೌಜನ್ಯಗಳೇ ಜೋಗುಳವಾಗಬೇಕು!-
ಹಸಿವೆಗೆ ಖುಷಿಯ ಅನ್ನವ ಹರಸಿದರೆ
ಹೃದ್ದವಡೆ ನೆನೆಯದ ನೀರ ನೀಡೀತು
ತೃಷೆಗೆ ನೆಮ್ಮದಿಯ ಸಿಹಿನೀರ ನೆನೆದರೆ
ನಿರಾಸೆಯ ಬೇಸರ ಎದುರಾಯಿಸೀತು,
ದಣಿವಿಗೆ ನೆರಳ ಬೇಡಿದರೆ
ಬಾಗು ಬೆನ್ನನೇ ಧಗೆ ಬಿಸಿಲಿಗೆ ದೂಡೀತು
ಹರಸದೇ ಏನೊಂದನೂ ವರಿಸದೇ ಸಾಗಬೇಕಿಲ್ಲಿ
ಆ ವಿಧಿಯ ತಿದಿಯ ಕಿಡಿಬೆಳಕಿನಡಿಯಲ್ಲಿ!-
ಏಸು ಭಾವದ ಬಾವಿಯ ನೀರ
ಒಂದ ಬಿಂದಿಗಿ ತುಂಬಿದಿ ಪೂರ
ಬಸಿದಷ್ಟೂ ಹನಿ ಹನಿಯೂ ಭಾರ
ಭವಿಸಿದಷ್ಟೂ ತೀರದ ಸಿಹಿದಾಹ ಸಾರ!
ನೋವಿಗೊಂದ ಹೆಸರ ಕೊಡತಿ
ಹೆಸರಿಗದು ನೋವೇ,?ಎಂದೂಡತಿ
ಹಾಡತಿ ಹಾಡನೇ ಹಾಡಿಸತಿ
ಕುಣಿಸಿ ಪದವ ಗುಣಿಸಿ ರಸಭಾವ
ನಿನ್ನಲ್ಲದ ನಿನ್ನಕ್ಷರಕ್ಕೆದುರಾದವಗೂ
ಕಲ್ಲು ಸಕ್ಕರೆಯ ಸಿಹಿಪಾಕ ಉಣಿಸತಿ!
ಸಾವಿರದ ಸಾವಿರ ಸಾಲ್ಗಳೂ ಸವಿಜೇನು
ಮಾಗಿರದ ಎಳೀಯ ಹುಳಿಮಾವ ಜೊನ್ನು
ಯಾ ಕಾಲಕೂ ಅವ ಸಿರಿಸುಖದ ಗಿರಿಗಣ್ಣು
ಕಾವ್ಯ ಕಾಮಧೇನು ನೀನು
ನುಡಿಗುಡಿಯ ಗಣ್ಯಗೋಣು!!— % &-