ಸಪ್ತಪದಿಗಳ ಸರಿಗಮ ಸರಿಯಿದ್ದರೆ
ಬದುಕಿನ ಕೃತಿ, ಸಂಸಾರದ ಶೃತಿ
ಲಯಬದ್ಧವಾಗಿರುತ್ತದೆ..!-
ಎಲ್ಲರನ್ನೂ ಮೆಚ್ಚಿಸುವ ಹುಚ್ಚೇಕೆ,
ಸೃಷ್ಟಿಕರ್ತನಲ್ಲೂ ನ್ಯೂನತೆಗಳನ್ನು
ಹುಡುಕುವ ಜನರಿರುವ ಜಗವಿದು..-
ವೈಯಕ್ತಿಕ ಲಾಭ ಮತ್ತು ಅನುಕೂಲತೆಗಳಿಗಾಗಿ
ಯಾವುದೇ ಅಧಿಕಾರ ಅಪೇಕ್ಷಿಸುವ ವ್ಯಕ್ತಿ,
ಆ ಸ್ಥಾನದ ಮೌಲ್ಯ, ಮಹತ್ವಗಳನ್ನು
ಎಂದಿಗೂ ಎತ್ತಿ ಹಿಡಿಯಲಾರ..!-
ವಾಸ್ತವಕ್ಕೆ ಮಂಕು ಬೂದಿ ಎರಚಿ
ಮರೆ ಮಾಚುವುದೇನಿದೆ..?
ನಾನು ನೀನು ಎಂಬ ಭೇದ ಹುಡುಕುತ್ತಾ
ಹೋದರೆ ಪ್ರೀತಿಸಲು ಮತ್ತೇನುಳಿದಿದೆ..?
ಒಲವಿನ ಬಣ್ಣದಲ್ಲೂ ಕಳಂಕ ಹುಡುಕುವ
ಪ್ರಯತ್ನ ಫಲ ನೀಡದು ಎಂದೂ ತಿಳಿದಿದೆ..!
ಮಾತಿನ ಹಿಂದಿನ ಮೌನ ಅರ್ಥವಾದರೆ
ದೊಂಬರಾಟದ ಅವಶ್ಯಕತೆ ಏನಿದೆ..?
ಖುಷಿ ನೀಡುವುದು ಮಾತ್ರ ನಮ್ಮ ಹುಚ್ಚುತನಗಳೆ
ಹೊರತು ಬುದ್ಧಿವಂತಿಕೆಯಲ್ಲೇನಡಗಿದೆ..?
ಎಲ್ಲಾ ಕಡೆ ಖುಷಿ ಹುಡುಕಲು ಮನಸ್ಸಿನ
ಹೊರತು ಮತ್ತ್ಯಾವ ಅರ್ಹತೆ ಬೇಕಿದೆ..?-
ಒಂದೇ ಒಂದು ವಿಷಯಕ್ಕೆ ಒಂದಾದ ಹಲವರು ಅನಗತ್ಯವಾಗಿ ಕಚ್ಚಾಡುವ ಸಾಕಷ್ಟು ನಿದರ್ಶನಗಳು ಕಣ್ಣಮುಂದಿದ್ದರೂ,
ವಿವಿಧತೆಗಳಲ್ಲಿ ಒಂದಾಗುವವರ ಪ್ರಯತ್ನವು ಮಾರಕ ಎನ್ನುವ ಬುದ್ದಿಜೀವಿಗಳಿಗೆ 'ಬುದ್ದಿ' ಹೇಳುವವರಾರು...!?-
ಸದಾ ಬದಲಾಗುವ ಬದುಕಿಗೆ
ಹೊಂದಿಕೊಳ್ಳದಿದ್ದರೆ,
ಬದುಕು ಬಡವಾಗುತ್ತದೆ..
ಹೊಂದಿಕೊಂಡು
ಮುಂದೆ ಸಾಗಿದರೆ
ಬದುಕೇ ವರವಾಗುತ್ತದೆ..-
ಅತಿಯಾದ ಮಮತೆಯ
ಸುರಿಸಿ ಆಕೆ ಮಾತೆಯಾದಳು..
ಪ್ರತಿ ಪ್ರೀತಿಯು ಪಾಠವಾಗಲೆಂದು
ಬಯಸಿ ಆತ ಪಿತೃವಾದನು..-
ಸಮುದ್ರಕ್ಕೆ ಸಿಹಿಯ ಪರಿಚಯವಿಲ್ಲ ಎಂದೇನಿಲ್ಲ,
ತನ್ನ ಬೇಟಿಗೆಂದು ಬರುವ ಎಲ್ಲಾ ಸಿಹಿ ನೀರಿನ
ನದಿಗಳನ್ನು ಉಪ್ಪಾಗಿಸುವ ಅಗಾಧ ಶಕ್ತಿಯಿದೆ..!-
ಸೂರ್ಯ ಪಥ ಬದಲಿಸಿದ್ದು
ಸಂಕ್ರಾಂತಿ ಆಗುವುದಾದರೆ,
ನಾವುಗಳು ನಮ್ಮ ಪಥ ಬದಲಿಸಿದರೆ
Some ಕ್ರಾಂತಿ ಆಗಬಹುದಲ್ಲವೆ..!?-
ಅಮಾಯಕರ ರಕ್ತದಿಂದ
ಸ್ವರ್ಗದ ದಾರಿಯು ರಾಡಿಯಾಗಿದೆ..
ರಕ್ತಸಿಕ್ತ ಕೈಗಳಿಗೆ ಪ್ರವೇಶ
ಶಾಶ್ವತವಾಗಿ ಮುಚ್ಚಲಾಗಿದೆ..
ಕಣ್ಣೆದುರಿಗಿರುವ ಸ್ವರ್ಗವ
ಕಣ್ತೆರೆದು ಹೊಸದಾಗಿ ನೋಡಬೇಕಿದೆ..-