ಕಣ್ಣು, ಕ್ಷಣವೂ ಕೆಳಗಿಳಿಸದು
ನಿನ್ನ ಕನಸುಗಳ,
ನರ್ತಿಸುವ ನೆನಪುಗಳ ಮೆಲುಕಿಗೆ
ಸಂಭಾಷಣೆ ಬರೆಯುತಿದೆ ಮನಸು.
ಅತಿರಮ್ಯ ಕಲ್ಪನೆಗಳ ಹೂಬನದಲಿ
ನಿನ್ನದೇ ಆಧಿಪತ್ಯ.
ಅವಿಶ್ರಾಂತ ರೆಪ್ಪೆಗಳ ಆಯಾಸಕ್ಕೆ
ನಿನ್ನನ್ನಲ್ಲದೇ ಇನ್ಯಾರ ದೂಷಿಯಾಗಿಸಲಿ..!?-
ತೋಚದಿರಲೇನು ಗೀಚಲಿ ನಾ...
ತೋಚಿದನ್ನೇ ಗೀಚುತಿರುವೆ..!
ಸಾಹಿತ್ಯದ ಗಂಧ,ಗಾಳಿಯನರಿಯದವಳು ನಾ
ಸಾಹಿತಿಗಳ ... read more
ಸೋನೆ ಮಳೆಯ ಮುಂಜಾನೆಯಲೊಂದು
ದಿನ ಮನಸು ಸೆರೆಹಿಡಿದ ಸೊಬಗಿಗೆ
ಪದವ ಜೋಡಿಸುವ ಕವನಗಾರನೊಬ್ಬ
ಪಕ್ಕದಲ್ಲೇ ಇರಬೇಕಿತ್ತು!
ಘಮ್ಮೆನ್ನುವ ಮಲೆನಾಡಿನ
ಕಾಫಿಯ ಮೆಲ್ಲಗೆ ಗುಟಕರಿಸುತ್ತ
ಮರೆಯದ ಕ್ಷಣದ ಹಚ್ಚ ಹಸಿರಿನ
ನೆನಪೊಂದ ಎದೆಯೊಳಗೆ ಹಚ್ಚೆ
ಹೊಯ್ದುಕೊಳ್ಳಬೇಕಿತ್ತು!!
✍ ಸುಮತಪಸ್ವಿನಿ🌹
-
ಹದಿಹರೆಯದ ನಡೆಗೆ ಹೆತ್ತವರ ನಾಲ್ಕು ಹದ್ದಿನ ಕಣ್ಣೇನೂ ಹಿಂಬಾಲಿಸಿರಲಿಲ್ಲ. ಒಂದಿಷ್ಟು ಚೌಕಟ್ಟಿನಲ್ಲಿ ಸ್ವತಂತ್ರಳೇ ಅಂದು ಅವಳು! ಹದ್ದು ಮೀರದ ನಡೆಯವಳು , ಎಲ್ಲರಂತಲ್ಲ ತಮ್ಮ ಮುದ್ದಿನ ಮಗಳೆಂಬ ಅತೀವ ನಂಬಿಕೆಯ ಉರುಳು ಇವಳೆಲ್ಲ ಕನಸಿನ ಕೊರಳಿಗೆ!
ನೀಲಾಗಸದೆತ್ತರಕೂ ಹಬ್ಬಿದ ಕನಸುಗಳ ರೆಕ್ಕೆಗೆ ಹಾರಾಡುವ ಹಬ್ಬವೆಂದೂ ಬರಲಿಲ್ಲ!!-
"ಹೇ ನವಿಲುಗರೀ.....! " ಕಿವಿಯ ಪಕ್ಕದಲ್ಲೇ ಝೇಂಕರಿಸಿದಂತೆ ಅವನ ದನಿ!.ಪಕ್ಕನೆ ಹಿಂತಿರುಗಿ ನೋಡುತ್ತೇನೆ. ಇಲ್ಲ! ಅವನಿಲ್ಲ!
ನನ್ನ ಭ್ರಮೆಗೆ ನಾನೇ ದನಿಯಿಲ್ಲದ ನಗುವೊಂದ ನಗುತ್ತೇನೆ.
ಒಲವಿನ ಪುಟಗಳ ಮೆಲುಕಿನ ಮಂದಹಾಸಕ್ಕೀಗ ಅವನೇ ಎದುರಾಗಬೇಕೆಂಬ ನೆರವೇರದ ಪುಟ್ಟ ಹಟ. ಗೀಜಗನ ಗೂಡಂತೆ ಹೆಣೆದುಕೊಂಡ ಅಂದಿನ ಕನಸುಗಳೆನೆಲ್ಲ , ಎಂದಿಗೂ ನೆರವೇರದೆಂಬ ನಿಜ ಅರಿತಿದ್ದರೂ ಇಂದಿಗೂ
ಜೀವಂತ ಇರಿಸಿಕೊಂಡದ್ದು ತಪ್ಪೋ...!? ಒಪ್ಪೋ...!?
ಯೋಚಿಸುವ ಗೊಡವೆಗೇ ಹೋಗಲಾರೆ ಈಗೀಗ!
-
ಸಾಲೊಂದಷ್ಟು ಬರೆದು
ಅವನೆದುರು ಹಿಡಿದು
ಭುಜಕೆ ತಲೆಯಾನಿಸಿದ ಕಿವಿಗಳ
ಕಾತುರತೆಗೆ ಅವನ ದನಿಯಲ್ಲಿ
ಸುರಿದಿದಿಷ್ಟು !
" ಸುಂದರ ಕವಿತೆ" !
ಭಾವನೆಗಳ ಬಸಿದು
ಅಕ್ಷರಗಳನದೆಷ್ಟೇ ಕೆತ್ತಿದ್ದರೂ..
ಅದೆಂದೂ ಅವನಾಂತರ್ಯವ
ತಲುಪಲೇ ಇಲ್ಲ!!
ನೀಲಿ ಶಾಯಿ ನೆಯ್ದ ಪದಗಳ
ಸರಪಣಿಗಳು ಬಿಳಿ ಹಾಳೆಯಲ್ಲಿ
ಶವಯಾತ್ರೆಯ ಮೆರವಣಿಗೆ ಹೊರಟಿದ್ದವು!
ನಿಟ್ಟುಸಿರ ಹಡೆದು ,
ಹೆಸರಿಟ್ಟಿತು ಮನಸು
"ಕವಿತೆ" ಎಂದು!!!
-
ಖಾಲಿ ಕ್ಷಣಗಳಲೆಲ್ಲ
ನವಿರು ನೇವರಿಕೆಯ ಬೆರಳ
ಹಿಡಿತಕ್ಕೆ ಸಿಗದೇ
ತಂಗಾಳಿಯ
ಜೊತೆ ಸರಸವೇ ಮುಂಗುರುಳೇ..!?
ಅವನಿರದ ಘಳಿಗೆಯಲೂ
ಅವನೊಲವಿನಮೃತ,
ಸಲಿಲದೋಪಾದಿಯಲಿ
ಎದೆಯ ಪ್ರತಿ ತಿರುವಿನಲಿ ಹರಿವ ಕಿಡಿ ಸದ್ದು,
ಸದ್ದಿಲ್ಲದೇ ನವ ಪ್ರೇಮ ಕಾವ್ಯದ
ಉಗಮಕೆ ನಾಂದಿ ಹಾಡುವುದು!
ಕಿವಿಗೊಟ್ಟು ಕೇಳು ಮರುಳೇ..!!
-
ಮನದ ಮೊರೆತ,
ಎದೆಯ ತುಡಿತ,
ಲೇಖನಿಯ ಆಗ್ರಹ,
ಎಂದೆಲ್ಲ ಹೆಸರಿಸಲೇಕೆ..!?
ನಾ ಬರೆವ ಕವಿತೆಗೆ!
ನೀನೊಂದು ಬಿಡದೆ ಹಿಡಿದ ಗ್ರಹಣ!
ಬಿಳಿಹಾಳೆಯೋ...
ನಾ ಆಗಾಗ ವಿರಮಿಸುವ ನಿಲ್ದಾಣ!!
ಸಾಲುಗಳೋ...
ಭಾವತೀರದ ಪದಗ್ರಹಣ!!
-
ಆಪ್ತರ ಸಂಖ್ಯೆ ಬೆರಳೆಣಿಕೆಯಷ್ಟೆಂಬುದಕೆ
ಬೇಸರವೇನಿಲ್ಲ.
ಅದೆಷ್ಟೋ ಬಂಧಗಳ ಬೇಕೆಂದೇ
ಎದೆಗಿಳಿಸಿಕೊಳ್ಳಲಿಲ್ಲ!
ಮತ್ತೆ ಮತ್ತೆ ಒಡೆವ
ಹೃದಯಕೆ ತೇಪೆ ಹಾಕುವಲ್ಲೇ
ವ್ಯಸ್ತಳಾಗುವ ಬದುಕು ಬೇಕಿರಲಿಲ್ಲ!!
-
ಅವಿತ ಭಾವಗಳನೊಂದಿಷ್ಟು
ಬಿಳಿ ಹಾಳೆಯ ಹೊಲದಲ್ಲಿ
ಬಿತ್ತಿ ಬಂದಿದ್ದೆ ಅಷ್ಟೇ...
ಯಾರದೋ ಹೃದಯದ
ನಾಸಿಕ ಆಘ್ರಾಣಿಸಿದ
ಮಲ್ಲಿಗೆ , ಸಂಪಿಗೆಯ ಘಮಲಿಗೆ
ಕವಿತೆ ಎಂದರು!
ಒಡೆದ ಹೃದಯದ ಚೂರು
ಚುಚ್ಚಿ ,ಬಿಳಿ ಹಾಳೆಯ ಬಯಲಲ್ಲಿ
ಹರಿದ ನೀಲಿ ನೆತ್ತರು,
ಅದ್ಯಾರ ಕಣ್ಣ ಕ್ಷಣ ಕಾಲ
ಹಸಿಯಾಗಿಸಿತೋ...
ಕವಿತೆ ಎಂದರು!!
ಕವಿಯಲ್ಲ ನಾನು!
ಕವಿಯಲ್ಲ ನಾನು!!
ಅಕ್ಷರಗಳ ಸಾಂಗತ್ಯದಲ್ಲೇ
ಕೆಲವೊಮ್ಮೆ ಮೈಮರೆಯುವವಳು!-
ನೀನೆಂದಾಕ್ಷಣ ಚಿಮ್ಮುವ ಭಾವತೀವ್ರತೆಯ
ಶರವೇಗಕೆ ಪದಗಳ ಜೋಡಿಸುವ
ಕಾಮಗಾರಿಗೆ ಕೆಲವೊಮ್ಮೆ
ಅಲ್ಪ ವಿರಾಮವಿಡುತ್ತೇನೆ...
ಪುಟ್ಟದೊಂದು ಭಯ ಗುಟ್ಟಾಗೇ ಕಾಡುತ್ತದೆ,
ಓದುವ ಹೆಣ್ಣು ಮನಸುಗಳಾವುದಾದರು
ಕಲ್ಪನೆಯಲ್ಲಿ ನಿನ್ನ ನೆನೆದರೂ
ದೃಷ್ಟಿ ತಾಕೀತು ಎಂದು!
ಹುಚ್ಚು ಮನಸಿನ ಹೆಚ್ಚುವರಿ
ಕಲ್ಪನೆಗಳಿಗೆ, ಕಣ್ಣ ಕಾಡಿಗೆಯ ತೆಗೆದು
ಕವಿತೆಯ ಪಕ್ಕದಲೊಂದು ಪುಟ್ಟ ಬೊಟ್ಟೊಂದ
ಇಟ್ಟೇ ಬಿಟ್ಟಿರುತ್ತೇನೆ,
ನಿನ್ನ ಕುರಿತು ಬರೆದ ಪದಗಳಿಗೂ ದೃಷ್ಟಿ
ಆದೀತು ಎಂದು!!
-