ಕುಂಟೆಬಿಲ್ಲೆ( ಮಕ್ಕಳ ಪದ್ಯ)
*******************
ಆಟವ ಆಡೆ ನಮ್ಮಯ ದಂಡು
ಓಡಿದೆ ವೇಗದೆ ಮೈದಾನವ ಕಂಡು
ಎಲ್ಲರ ನೋಟವ ಸೆಳೆದಿದೆ ಈ ಹಿಂಡು
ಆಡಲು ಇಲ್ಲವೆ ಇಲ್ಲ ಯಾವುದೆ ಬಂಡು
ಇಂದಿನ ಆಟವು ಕುಂಟೆಯಬಿಲ್ಲೆ
ಅದಕೆ ಬೇಕೊಂದು ಚಪ್ಪಟೆ ಕಲ್ಲಿನ ಬಿಲ್ಲೆ
ಬಿಲ್ಲೆಯ ಎಸೆದು ಆಡಲು ನಾ ಬಲ್ಲೆ
ಅಮ್ಮ ಬೇಡೆಂದರು ನಾನಂತೂ ಒಲ್ಲೆ
ಚೌಕಾಕಾರದ ಮನೆಗಳ ಗೀಚೋಣ
ಬಿಲ್ಲೆಯ ಮನೆಯೊಂದಕೆ ಎಸೆಯೋಣ
ಬಿಲ್ಲೆಯ ಚಿಮ್ಮುತ ಕುಂಟುತ ಜಿಗಿಯೋಣ
ಕುಂಟೆಬಿಲ್ಲೆಯ ಆಡುತ ನಾವು ನಲಿಯೋಣ
ಆಡುತ ಕುಣಿಯುತ ನಾವ್ ದಣಿದಾಗ
ನಮಗಿರೆ ಮರದ ತಂಪಿನ ನೆರಳಾಗ
ಮಡಿಕೆಯ ನೀರನು ಕುಡಿದು ತಣಿದಾಗ
ಹುರುಪಿನ ಆಟದ ಮಜವನು ನೋಡಾಗ.
-
🌹ಮುಂಗಾರಿನ ಮಳೆ🌹
ಇಳಿದಳೋ ದಿವಿಯಿಂದ ಇಳೆಗೆ ಇಳಿದಳೋ
ಬೆಡಗು ಬಿನ್ನಾಣದೆ ಬಳಕುತಾ ತಾ ಇಳಿದಳೋ
ವನಪು ವಯ್ಯಾರದೆ ಒಲೆದಾಡುತಾ ನಿಲುಕಿದಳೋ
ಜಲಕನ್ಯೆಯಂತೆ ಭುವಿಗೆ ತಣಿವು ತಂದಳೋ..
ಝರಿಯಾಗಿ ಭುವಿಯ ಸಿರಿಯಾಗಿ ಹರಿದಳೋ
ಹರಿದರಿದು ಕಡಲ ಒಡಲಾಗಿ ಉಳಿದಳೋ
ಶಿವನ ಜಟೆಯಿಂದ ಗಂಗೆಯಾಗಿ ಇಳಿದಳೋ
ಇಳಿದು ನಲಿದು ಇಳೆಯ ಮುದ್ದಿಸಿ ನಿಂದಳೋ..
ಮೊದಲ ಮಳೆಯು ಇಳೆಗೆ ಸುಧೆಯ ಪಾನವು
ಬಿರಿದ ನೆಲಕೆ ಜಲವೇ ತಾಯ ಸ್ಪರ್ಶ ಚೇತನವು
ಜಳಕಗೈದ ಭುವಿಯ ಪುಳಕವೆಂತ ಚಂದ ನೋಡು
ನಭಚರಗಳು ಕಲರವಗೈದವು ಬಿಟ್ಟು ಗೂಡು.
ಜುಳು ಜುಳು ಜುಳು ಜುಳು ನೀರೋಟವು
ತೃಣ ತೃಣ ತೃಣ ಹಸುರಿಸಿದ ಆ ನೋಟವು
ತೃಷೆ ನೀಗಿದ ಮುಂಗಾರಿನ ಆ ಸಿಂಗಾರಕೆ
ಮನಮನವೂ ಸೋತಿದೆ ಮಳೆ ಹಾಡಿದ ಸುವ್ವಾಲಿಗೆ.-
❤️ಮೊದಲ ಸಂಭ್ರಮ❤️
ಮೊದಲ ನೋಟಕೆ ಮನ ನಾಚಿತು
ಮೊದಲ ಮಳೆಗೆ ಇಳೆ ತಣಿಯಿತು
ಇಳೆಯ ಒಡಲಲಿ ಹಸಿರು ಚಿಗುರಿತು
ನಲ್ಲೆಯ ಮನದೆ ಆಸೆ ಹೂ ಕೊನರಿತು.
-
💟ವರ್ಣಮಯ ಬಾಳಿನ ಕಣ್ಣು ಹೆಣ್ಣು💟
💛ಹಳದಿ ಬಣ್ಣದ ಹೊನ್ನ ಬಾಳಿಗೆ ಹೆಣ್ಣೇ ಅಲ್ಲವೇ ಹೇತುವು
💚ಅವಳನರಿತು ಗೌರವಿಸೆ ಆಗುವಳು ಬಾಳಿಗೆ ಹಸಿರು ತೋರಣ
🤍ಅವಳು ನಗುತಿರಲು ಎಲ್ಲೆಲ್ಲೂ ಚೆಲ್ಲಲು ಬೆಳ್ಳನೆ ಬೆಳದಿಂಗಳು
💙 ಹೊಂದಿ ಬಾಳಲು ಅವಳೇ ನೀಲಿ ಬಾಂದಳದ ಮಿನುಗು ಚುಕ್ಕಿ
🧡ಹಣೆಯ ಕೇಸರಿ ತಿಲಕ ಕೆಣಕುವ ದುರಾತ್ಮರಿಗೆ ದುರ್ಗೆಯ ಸಂಕೇತ
❤️ತಾಳ್ಮೆ ಕೆಡೆಸೆ ಕಂಗಳಲಿ ಪ್ರಜ್ವಲಿಸುವುದು ಕೆಂಪು ಜ್ವಾಲೆ
🖤 ಅವಳ ಭಾವನೆಗಳಿಗೆ ಸಿಗಲು ಮೌಲ್ಯ ಕಾಯ್ವಳು ದೃಷ್ಟಿ ತಾಕದ ಕಪ್ಪು ಚುಕ್ಕಿಯಾಗಿ
-
ಮೌನಕ್ಕೆ ಶರಣಾದವಳ ನೋವಿಗೆ ಸಂಗಾತಿ.
ದುಃಖವನ್ನು ಶಮನಗೊಳಿಸುವ ಅಶ್ರು ಬಿಂದುವಿಗೆ ಜನನಿ.-
ಶೀರ್ಷಿಕೆ: ಹರ ಹರ ಮಹದೇವ
**************************
ಶಿವ ತತ್ವ ಎದೆಯಲ್ಲಿ ಧ್ವನಿಸಿರಲು
ಪರತತ್ವದ ಗೊಡವೆಯೇಕೆ ...
ರಕ್ಷಿಪ ಶಿವನು ನಿನ್ನೊಳಗಿರಲು
ಅನ್ಯ ಭಯಗಳೇತಕೆ ಮನವೇ..?
ಶಿವ ಚಿಂತನೆಯಲ್ಲೇ ನಿರುತವಿರುವಂತೆ
ಅನುಗೊಳ್ಳು ಓ..ಮನವೇ
ಶಿವ ಧ್ಯಾನವೇ ಅನವರತವಿರಲು
ಪರ ನಿಂದೆಗೆಲ್ಲಿ ಎಡೆಯು..
ಭಕ್ತಿ ಭಾವದೆ ಮೂರುದಳದ ಬಿಲ್ವನರ್ಪಿಸೆ
ಮುಲ್ಲೋಕದೊಡೆಯ ತೃಪ್ತನು..
ಮನದ ಭಕ್ತಿಗೆ ಪರವಶನು ಪರಮಶಿವನು
ಶಿವನೊಲಿಸೆ ನಿನಗಿರಲಿ ಆತ್ಮ ಶುದ್ಧಿ ಮನವೇ..
ನಂಜುಂಡೇಶನೇ ನೀ ಕಲಿಸು ಎನಗೆ
ಬನ್ನಂಗಳನು ನುಂಗೋ ಕಲೆಯ
ಭಕ್ತ ಕಣ್ಣಪ್ಪನಿಗೊಲಿದ ಮುಕ್ಕಣ್ಣನೇ
ನಂಬಿಹೆನು ನಿನ್ನನೇ ಕರುಣಿಸೈ ನಾಗಾಭರಣನೇ..
ಓಂ ನಮಃ ಶಿವಾಯ..ಓಂ ನಮಃ ಶಿವಾಯ..
ಹರ ಹರ ನಮಃ ಶಿವಾಯ..
ಕೆ.ಎ.ಸುಜಾತ ಗುಪ್ತ
-
ಶೀರ್ಷಿಕೆ: ಪುಟ್ಟ ಹಕ್ಕಿ
ಒಹೊಹೋ..ಹಕ್ಕಿ ಮರಿ
ಅರೆರ್ರೆ..ನನ್ನ ಮುದ್ದು ಮರಿ
ಅಲ್ಲಿ ಇಲ್ಲಿ ಸುತ್ತಿ ಬಂದೆ ಹಾರಿ
ಕುಂತು ಬಿಟ್ಟೆ ನನ್ನ ನೆತ್ತಿ ಏರಿ.
ಕಣ್ಣಲ್ಲೇಕೆ ಹಿಂಗೆ ಬಲು ಕ್ಲಾಂತಿ
ಅಮ್ಮನಿಲ್ಲದೆ ಇಲ್ಲವಲ್ಲ ಶಾಂತಿ
ತಪ್ಪಿದ್ದಿಲ್ಲ ನಿಂಗೂ ನಂಗೂ ಬ್ರಾಂತಿ
ಕೊಂಬೆ ಮೇಲೆ ನೋಡು ಹಕ್ಕಿ ಬಂತಿ.
ನೀನೆಂದ್ರೆ ನಂಗೆ ಬಲು ಇಷ್ಟ ನೋಡು
ನೆತ್ತಿ ಏರಿ ಕುಂತ್ರೆ ಮಾತ್ರ ಬಲು ಕೇಡು
ತಲೆ ಮೇಲಿಲ್ಲ ನಿನ್ನ ಅಂದದ ಮಾಡು
ಹುಡುಕೋಣ ಬಾ ನಿನ್ನ ಚಂದದ ಗೂಡು.
ನೀಲಿ ರಂಗಿನ ಪುಟ್ಟ ಪುಚ್ಚವೇ ನಿಂದು
ನಿನ್ನಂತ ಮುದ್ದಾದ ಅಗಲ ಕಣ್ಣು ನಂದು
ಕೊಕ್ಕಿನಲ್ಲಿ ನನ್ನ ಕುಕ್ಕ ಬೇಡ ಎಂದೂ
ನನ್ನ ಬಿಟ್ಟು ಹೋಗಬೇಡ ನೀನೆಂದೂ.
ಕೆ.ಎ.ಸುಜಾತ ಗುಪ್ತ
-