ಕೆಂಪು ಕಣ್ಣು ರಕ್ತ ಇನ್ನೇನು ಚಿಮ್ಮಬಹುದು ರಕ್ತನಾಳಗಳ ಘೋರ ದರ್ಶನ ಮುಖವೆಲ್ಲ ಸುಟ್ಟಂತೆ ಮೂಗಿನಿಂದ ಬಿಸಿಗಾಳಿ ಮೂಗಿನೊಳಗೆ ಸುಡು ಸುಡು ಗಾಳಿ ಅಳ್ನೆತ್ತಿ ಉರಿದಂತೆ ತಲೆ ಬುರುಡೆ ಬಿರಿದಂತೆ ಕೆಂಡಗಳು ಆಕಾಶದಿಂದುದುರಿ ಮೈಗೆ ಮುತ್ತಿದರೂ ಸಹ ನಗುತ್ತ ಬದುಕಿಹರೆಂದರೆ! ಕಲಬುರಗಿ ಊರಿನವರೇ, ಸೂರ್ಯನೇ ಸೋತ.
ಮೂಕಹಕ್ಕಿಯಾದ ನಾ ಏನಂತ ಚಿಂವಗುಟ್ಟಲಿ ಚಿಕ್ಕ ಗುರುತನ್ನೂ ಉಳಿಸದೇ ಎಲ್ಲಿ ಹಾರಿಹೋದೆ ಸಪ್ತಸಾಗರಗಳಾಚೆಗೆ ಹಾರಾಡಿ ಹುಡುಕಲೂ ಸಹ ರೆಕ್ಕೆಗಳಿಗೆ ಬಲವಿಲ್ಲ, ಕಣ್ಣುಗಳಲ್ಲೂ ಹೊಳಪಿಲ್ಲ ಇದ್ದ ಜಾಗಕ್ಕೆ ಬಂದು ತುತ್ತು ತುರುಕಿ ಹೋಗುವ ಆ ನೆನಪುಗಳಲ್ಲೇ ಹಸಿವೂ ಬಹುಶಃ ಸತ್ತಿದೆ ಗಾಳಿಗೆ ಸಿಕ್ಕ ನಿನ್ನ ಪುಕ್ಕಗಳ ಬಂದಾವು ಎಂಬ ನಿರೀಕ್ಷೆಯಲ್ಲಿ ಜೀವ ಹಿಡಿದದ್ದೇ ವೃತವಾಗಿದೆ.
ಹೃದಯದೊಳು ನೀ ಕೂಡಿಟ್ಟ ಮನದಾಳದಿ ನಾ ಬಚ್ಚಿಟ್ಟ ಪರಿಧಿಯ ದಾಟಿ ಹೊರಬಾರದ ಭಾವನೆಗಳು ಉಸಿರುಗಟ್ಟಿ ಸಾಯದೇ ನಮ್ಮ ಉಸಿರಿನಲ್ಲಿ ಜೀವಂತವಾಗಿವೆ ಪರಸ್ಪರ ಅರಿವಿಗೆ ಬಂದರೆ ಜೀವಿಸಲಿ ಅವು ನಾವಾಗಿಯೇ ಕೊಲೆಗಡುಕರಾಗಿ ಶಿಕ್ಷೆ ಅನುಭವಿಸುವುದು ಬೇಡ ಎಂದರೆ ಹೃದಯಕ್ಕೊರಗು.
ಒಲವಿನ ಓಲೆಯೊಂದ ಬರೆಯಲು ಕುಳಿತಾಗ ನಿನ್ನ ಕಿವಿಯೋಲೆಯಂದವೇ ಮನದ ತುಂಬ, ಪದಗಳ ಗೀಚಲು ಲೇಖನಿಯ ಮುಷ್ಕರ ಇನ್ನೊಂದೆಡೆ ಚಂಚಲ ಚಿತ್ತದ್ದೇ ಹುಚ್ಚಾಟ, ಕೊಂಡು ತಂದಾಗ ಅದರಲ್ಲೇನೂ ಇರಲಿಲ್ಲ ನಿನ್ನ ಕಿವಿಯನ್ನಲಂಕರಿಸಿದಾಗಲೇ ಈ ಆಟ.
ಹೊರಡುವ ಮುನ್ನ ಕಾರಣ ಹೇಳಿ ಹೋಗು, ನೆನಪುಗಳ ತುಣುಕುಗಳು ನಡೆದ ಹಾದಿಯಲ್ಲಿ ಬಿಕ್ಕಿ ಅಳುತ್ತಿವೆ, ಅವುಗಳ ಸಂತೈಸಿ ಒಮ್ಮೆ ಮುತ್ತಿಕ್ಕು, ಭಾರವೇನಿಲ್ಲ ಅವು ಬಹಳ ಹಗುರಾಗಿವೆ ಬಳಿದು ಚೀಲದಲ್ಲಿ ತುಂಬು, ಪ್ರೀತಿ ಸತ್ತಿರಬಹುದು ನೆನಪುಗಳಂತೂ ಜೀವಂತ ಅಲ್ಲಿ ನಾನೂ ಜೀವಂತ.