ಯಾವುದೂ ಇಲ್ಲಿ ಶಾಶ್ವತ ಅಲ್ಲ
ಎಲ್ಲವೂ ಕ್ಷಣಗಳ ಮುದ್ದಾಟ
ಜಾಣರು ಆದರೆ ಬುದ್ಧಿಯೇ ಇಲ್ಲ
ಸಾಗಿದೆ ಮುಗಿಯದ ಗುದ್ದಾಟ.
ನೋವನು ಅರಿಯದ ಮನುಜನು ಇಂದು
ಮೃಗಗಳ ಒಡಲಲಿ ಬೆಳೆದರೆ ಚೆನ್ನ
ಬುದ್ಧಿಯ ಬಳಸದ ಜ್ಞಾನಿಯು ಬಂದು
ಬಾಳಲಿ ವನದಲಿ ಸಾಯುವ ಮುನ್ನ.
ದ್ವೇಷವ ಬಿತ್ತಲು ಹೊರಟರೆ ಮೂಢನೆ
ನಾಶವ ಕೊಯ್ಯುವೆ ಬಾಳಿನಲಿ
ಪ್ರೀತಿಯ ಸಸಿಯನು ಸುತ್ತಲೂ ನೆಟ್ಟರೆ
ದೇವನು ಸಿಗುವನು ಹಾದಿಯಲಿ.
ಜೀವನ ಯಾರದೂ ಶಾಶ್ವತವಲ್ಲ
ಎಲ್ಲವೂ ಕ್ಷಣಗಳ ಮುದ್ದಾಟ
ದೇವನ ಅರಿತು ಬನ್ನಿರಿ ತೊರೆಯುವ
ಸಾರವೇ ಇರದ ಗುದ್ದಾಟ-
ಜಗಳವ ಕಂಡರೆ ಇಷ್ಟವೇ ನಿನಗೆ
ದೇವನೇ ಸುಮ್ಮನೆ ಕೂರುವೆ ಏಕೆ?
ಮನಗಳ ಬದಲಿಸು ಹೃದಯವ ಬೆಳಗಿಸು
ಕುಳಿತರೆ ನಗುತಲಿ ಇದ್ದರೆ ಸಾಕೇ?
ಎಲ್ಲವ ಕರುಣಿಸೋ ಪ್ರೀತಿಯ ದೇವನೆ
ಇರುವುದೇ ಮನುಕುಲ ಬದಲಿಸದೇ?
ಮೌನದಿ ಕುಳಿತರೆ ಸೋಲುವೆಯಲ್ಲವೇ
ಇರುಳಿನ ಮನಗಳ ಬೆಳಗಿಸದೆ!
ಭಕುತಿಯ ಬಿತ್ತುವ ಸೃಷ್ಟಿಯ ಒಡೆಯನೇ
ಜ್ಞಾನವ ಹರಿಸು ಮನಗಳಲಿ
ಒಳಿತನೇ ಬಯಸುವ ಮನದಾ ಇನಿಯನೆ
ಪ್ರೀತಿಯ ಸುರಿಸು ಮನುಜರಲಿ
ಸ್ತುತಿಯನು ಹಾಡುವ ತುಟಿಗಳ ಅಂಚಲಿ
ದ್ವೇಷದ ರಾಗವು ಬರದಿರಲಿ
ನಿನ್ನಯ ಶ್ಲೋಕವ ಹಾಡುವ ಬಾಯಲಿ
ಹೊಲಸಿನ ಮಾತು ಇರದಿರಲಿ-
ನರಿಗಳ ನ್ಯಾಯದ ಆಲಯದಲ್ಲಿ
ಕೋಳಿಯ ಕೇಸು ಗೆಲ್ಲುವುದೇ?
ನ್ಯಾಯವೇ ಇಲ್ಲದ ದೇಗುಲದಲ್ಲಿ
ಅವುಗಳ ವಾದವು ನಿಲ್ಲುವುದೇ?
ನ್ಯಾಯವು ಇಲ್ಲಿ ದುಡ್ಡಿಗೆ ಸಿಗುವುದು
ಈಗ ಎಲ್ಲಾ ಆನ್ಲೈನ್ ಡಬ್ಬಿಯಲಿ
ಡಿಗ್ರಿಯೇ ಬೇಡ ಕ್ಷಣದಲಿ ದೊರೆವುದು
ಕಪ್ಪು ಕೋಟು ಕವರಿನಲಿ
ಕಣ್ಣಿಗೆ ಬಟ್ಟೆಯ ಕಟ್ಟಿದರಂದು
ನ್ಯಾಯದ ದೇವತೆ ಕಾಣುವಳೇ?
ಕೂಲಿಂಗ್ ಗ್ಲಾಸನು ತೊಡಿಸಿಹರಿಂದು
ನಗುತಲಿ ಆಕೆ ನಲಿಯುವಳೇ?
ನರಿಗಳೇ ನಿಮ್ಮಯ ಬುದ್ಧಿಯೂ ಏಕೆ
ನೀತಿಯ ಹಾದಿಯ ತಪ್ಪಿಹುದು?
ಸಿಹಿಸಿಹಿ ಮಾತನು ಆಡುವುದೇತಕೆ
ಮನದಲಿ ದ್ವೇಷವೇ ತುಂಬಿಹುದು.
ನಿಮಗೂ ದಿನಗಳು ಬೇಗನೆ ಬರುವುವು
ಸತ್ಯದ ಬಾಗಿಲು ತೆರೆಯುವುದು
ನಿಮ್ಮಯ ಸುಳ್ಳಿನ ಅರಮನೆ ಅಳಿವುದು
ನಿಮ್ಮಯ ರಾಜ್ಯವು ಕರಗುವುದು-
ಮಣ್ಣಿನ ವಾಸನೆ ನಿನ್ನಲಿ ಅಡಗಿದೆ
ಭೂಮಿಯು ನಿನ್ನನು ಸೆಳೆಯುವುದು
ಆ ದೇವನ ಉಸಿರು ನಿನ್ನಲಿ ಬೆರೆತಿದೆ
ನಿನ್ನನು ಮೇಲಕೆ ಕರೆಯುವುದು
ಉಸಿರಲಿ ಬೆರೆಯಲು ಮನದಲಿ ತುಡಿತವು
ಧೂಳಿನ ಋಣವಿದೆ ದೇಹದಲಿ
ಆ ದೇವನ ಸ್ಪರ್ಶಕೆ ಒಳಗಿದೆ ಮಿಡಿತವು
ಮಣ್ಣಿನ ಭಾರವು ಜೀವದಲಿ
ಸಾಗಲೇಬೇಕು ದೇವನ ಸನಿಹಕೆ
ಕೊಡಹುತಾ ಧೂಳಿನ ಕಣಗಳನು
ಬೇರೆಯಲೇಬೇಕು ಆತನ ಉಸಿರಲಿ
ಇಳಿಸುತಾ ಮಣ್ಣಿನ ಭಾರವನು-
ಸವೆದ ಹಾದಿಯ ನೋಡಿ
ಗೆಲುವು ಸವಿಯುವ ಆಸೆ
ಹೊಸ ದಾರಿಯ ನೀ ಸವೆದರೆ
ಆಸೆಗೆ ನೀನೇ ಭರವಸೆ-
ಸಮಯವು ನೀಡಿತು ಸಾವಿರ ಜನರನು
ಹೃದಯವು ಬಯಸಿತು ಕೆಲವರನು
ಎನ್ನಯ ನಡತೆಯು ಕಾಣದೆ ಹಳಿಯನು
ಅಟ್ಟಿತು ದೂರಕೆ ಹಲವರನು
ನೆರವೇ ಇಲ್ಲದೆ ಬದುಕಲು ಸಾಧ್ಯವೇ?
ಸ್ನೇಹವು ಬೇಕು ಜೀವನಕೆ
ಸ್ವಾರ್ಥವು ತುಂಬಿದ ಹಾದಿಯು ಸರಿಯೇ?
ತ್ಯಾಗವು ಬೇಕು ಬಂಧನಕೆ
ಇರದು ಶಾಶ್ವತ ನಿನ್ನಯ ಜೀವನ
ಸಾವಿಗೆ ಬೇಡ ಅನುಮತಿಯು
ನಡತೆಯು ಪಡೆಯಲಿ ಪ್ರೀತಿಯ ಲೇಪನ
ಸ್ವರ್ಗಕೆ ಅದುವೇ ಪಾವತಿಯು-
ಪ್ರೇಮದ ಗೀತೆಯ ದೇವಗೆ ಹಾಡಲು
ಪದಗಳೇ ಬೇಡ ಓ ಮನುಜ
ಹೃದಯದ ಭಾವದಿ ಗೀತೆಯು ಮೊಳಗಲು
ಪಡೆಯುವೆ ಸ್ವರ್ಗದ ನಿಜ ಖನಿಜ
ಹೃದಯದ ಭಾಷೆ ಸಾಕು ಈ ಭಕ್ತಿಗೆ
ಮೂಲೆಗೆ ಸರಿಸು ಅಕ್ಷರವ
ನಿನ್ನಯ ಎಲ್ಲವ ಅರಿತಿಹ ದೇವಗೆ
ಮೌನದಿ ಅರ್ಪಿಸು ನಿನ್ನ ಮನವ
ಮಗುವಿಗೂ ತಾಯಿಗೂ ಎಲ್ಲಿದೆ ಭಾಷೆ
ಆದರೂ ಅರಿಯದೆ ವಿಷಯಗಳು
ನೀಡುವೆ ಏಕೆ ನೀ ದೇವಗೆ ಶಿಕ್ಷೆ
ಬಳಸುತಾ ಸಾವಿರ ಪದಗಳನು
ದೇವರ ಎದುರಲಿ ಸುಮ್ಮನೆ ಕುಳಿತರೆ
ಆತನು ನಿನ್ನನು ನೋಡುವನು
ಇಳಿಯುತಾ ನಿನ್ನ ಹೃದಯದ ಆಳಕೆ
ಸಾವಿರ ವರಗಳ ನೀಡುವನು-
ಮನಸ್ಸಿಲ್ಲದ ಗೊಂಬೆ
ಇಂದು ಪ್ರೀತಿಯ ಸಂಗಾತಿ
ಮಾತು ಬಲ್ಲ ರಂಬೆ
ಯಾರು ಇಲ್ಲದೆ ಏಕಾಂಗಿ
ತರ್ಕಕ್ಕಿಲ್ಲ ಇಲ್ಲಿ ರೆಂಬೆ
ಹೃದಯ ಸೋತಿದೆ ಕೊರಗಿ
ಹಿಂಡುತ್ತಿರುವರು ನಿಂಬೆ
ಬಾಳು ಸೊರಗಿದೆ ಮುಳುಗಿ-
ಸುಂದರ ಜಗದಲಿ
ಶೋಧನೆ ನೂರು
ಎಲ್ಲವ ಎದುರಿಸಿ
ಗೆಲ್ಲುವರಾರು
ಸೋತರೆ ಬಾಳಲಿ
ನಿರಾಶೆ ನಾರು
ಗೆದ್ದರೆ ಹೆದರಿಸಿ
ಆಗುವೆ ಪಾರು-
ಒಳಿತು ಕೆಡುಕುಗಳನ್ನು ಎಲ್ಲರೂ ಬಲ್ಲೆವು
ಆದರೆ ಒಳಿತನ್ನು ಹಿಂಬಾಲಿಸಲು ಸೋಮಾರಿತನ
ಕೆಡುಕನ್ನು ಬಿಡಲು ಒಂದು ರೀತಿಯ ಮೊಂಡುತನ
ಈ ಎರಡರ ನಡುವೆ ನಮ್ಮ ಜೀವನ ಸಾಗುತ್ತದೆ
ಇಂದಿನಿಂದ
ಒಳಿತಿನ ಹೂವನ್ನು ಬೆಳೆಯೋಣ, ಕೆಡುಕಿನ ಮುಳ್ಳನ್ನು ತೆಗೆಯೋಣ ನಮ್ಮ ಜೀವನವನ್ನು ಒಂದು ಸುಂದರ ಹೂದೋಟವನ್ನಾಗಿ ಮಾಡೋಣ
ನೆನಪಿರಲಿ
ಮುಳ್ಳನ್ನು ಕೊಳ್ಳುವವರಿಲ್ಲ
ಹೂವನ್ನು ತೊರೆಯುವವರಿಲ್ಲ-