ಮೊಗದಲ್ಲಿ ಮಂದಹಾಸವಿರಲು
ಮನದೊಳಗೆ ಅಳು ಅಡರಿಕೊಂಡು
ಆರಿಸಲಾಗದ ನೋವೆಂಬ ಬೆಂಕಿ ಉರಿಯುತ್ತಿರೆ
ಬೆಂದು ಬೂದಿಯಾಗದೇ
ಬೇರೆ ದಾರಿಯುಂಟೆ ಚೆನ್ನಮಲ್ಲಿಕಾರ್ಜುನ ದೇವಾ-
ಸೂರ್ಯನ ಕಿರಣಗಳು ತಾಕಬಾರದೆಂದು
ಪರದೆಯ ಹಿಂದೆ ಸರಿದೆ
ಸುಳಿವೇ ನೀಡದೆ ನೀ
ಮನದೊಳಗೆ ನುಸುಳಿ ಬಿಟ್ಟೆ ....-
ಅರಳಿದ ಭಾವನೆಗಳ ಬುತ್ತಿಯ ಬಿಚ್ಚಿಡಲು
ಕಾಲುಂಗುರದ ಬೆರಳು ನಾಚಿಕೆಯಿಂದ
ರಂಗೋಲಿಯಲ್ಲಿ ಓಲೆಯ ಗೀಚುತ್ತಿದೆ
ಅದ ಓದಾಲಾಗದೇ ಇನಿಯ ನಿನಗೆ.....
-
ಬದುಕೆಂಬ ಭಾನ ಬನದಲ್ಲಿ ಪೂರ್ವದಲ್ಲಿ ಹುಟ್ಟಿ
ನಡುವಣ ಮತ್ತೊಬ್ಬರ ನಗುವಿಗೆ ಕಿರಣವಾಗಿ
ಬದುಕ ಭಾನ ಬನದಲ್ಲಿ ಪಶ್ಚಿಮದಲ್ಲಿ ಸಾವಾದರೂ
ಹೊಸ ಭರವಸೆಯ ಕನಸು ಬಿತ್ತುವುದೇ ಭಾನು.....
-
ಮನುಷ್ಯತ್ವವ ನೋಟಿನಲ್ಲೆ ಅಳೆದು
ಬದುಕಿನುದ್ದಕ್ಕೂ ನೋಟಿನ ಹಿಂದೆ ಅಲೆದು
ಸ್ವಾರ್ಥದ ನೋಟಿನಿಂದನೇ ಅಳಿಯುವ
ಜಗದ ಜಂಜಾಟವ ನೋಡಲಾಗದು ಕಾಣಾ
ಚೆನ್ನಾಮಲ್ಲಿಕಾರ್ಜುನ ದೇವಾ............-
ಕತ್ತಲ ಪ್ರಪಂಚದಲ್ಲಿ ಆಪತ್ತಿನ
ಅರಿವಿಲ್ಲದೆ ಅಡಗಿದೆ ಅಂದು...
ಬೆಳಗುವ ಸಾವಿರಾರು ದೀಪಗಳಿದ್ದರೂ
ಕತ್ತಲೆ ತುಂಬಿದೆ ಬದುಕಿನಲ್ಲಿ ಇಂದು...
-
ಆಡಂಬರದ ಅರಮನೆಯಲ್ಲಿ
ಅವಿತು ಕುಳಿತೆ
ಭಂಡಾರದ ತುಂಬಾ ಚಿನ್ನವೇ ತುಂಬಿದ್ದರು
ಒಬ್ಬರಲ್ಲೂ ಮೌಲ್ಯವೇ ಇಲ್ಲ
ಖುಷಿ ಮನೆ ತುಂಬಾ ಆವರಿಸಿದರೂ
ಆರದ ಭಯ ಹೊಗೆಯಾಡುತ್ತಿದೆ
ನೆಮ್ಮದಿಯ ಮಳೆಯಲ್ಲಿ ನೆನೆಯುತ್ತಿರುವೆನೆಂಬ
ಊಹೆ ಮನ ತುಂಬಿದೆ
-
ಕಾಯಬೇಡ ನನ್ನ ಮನದಲ್ಲಿ
ಮೂಡಿದ ಕವಿತೆಗಳಿಗೆ
ಅವುಗಳೆಲ್ಲಾ ರೆಕ್ಕೆಗಳಿಲ್ಲದೆ ಹಾರ
ಬಯಸುವ ಹಕ್ಕಿಗಳಂತೆ
-