ತಲೆಗೇರಿದ ನಾನತ್ವದ ಹುಳುಕಿಗೆ
ಮನವಷ್ಟೇ ಅಲ್ಲ,
ಮೆದುಳೂ ಕೊಳೆಯುತ್ತದೆ...!
ತುಟಿ ನಕ್ಕರೂ,ಮನದ ಸೊಕ್ಕು
ನುಡಿಯಲ್ಲಿ ಪ್ರತಿಬಿಂಬಿಸುತ್ತಿರುತ್ತದೆ.
ನಾನು ನಾನೆಂಬ ಗರ್ವ ಇಳಿದರಷ್ಟೆ
ಸ್ನೇಹ ಸಂಬಂಧ ಚಿರಾಯು,
ವೃತ್ತಿ ಬದುಕಿನಲಿ ಯಶಸ್ಸು....!!-
ಮುಖವಾಡ ಬೇರು ಬಿಟ್ಟಿದೆ
ಕಿತ್ತೊಗೆಯಲಾರದಷ್ಟು....!
ನಂಬಿಕೆ ತೀರಾ ಹದಗೆಟ್ಟಿದೆ
ಬದುಕುಳಿಯಲಾರದಷ್ಟು...!-
ಅದೆಷ್ಟೋ ಪರೋಪಕಾರಗಳು ಕೃತಘ್ನತೆಯ
ಉರಿಬಿಸಿಗೆ ನರಳಿ ನರಳಿ ಸಾಯುತ್ತವೆ.
ಚೂರುಪಾರು ನೆನಪಿನ್ನಲ್ಲುಳಿದ ಉಪಕಾರಗಳು ಕೃತಜ್ಞತೆಯ ನೆರಳಿನ ಮಡಿಲಲ್ಲಿ ಸುಖಿಸುತ್ತವೆ..-
ಕಷ್ಟ ಎಂದಾಗ ನಿನಗಾಗಿ ನಾ ಮಾಡಿದ ಸಾಲ
ಹಿಂತಿರುಗಿಸದೆ ನೀ ಸತಾಯಿಸಿದ ಆ ಕಾಲ
ಸ್ನೇಹದ ಹೆಸರಿನಲ್ಲಿ ನೀ ಹರಡಿದ ಮೋಸದ ಜಾಲ
ಮರೆಯಲಾಗುವುದೇ....!!-
ಕಷ್ಟ ಎಂದಾಗ ಕಷ್ಟ ಪಟ್ಟು
ದುಡಿಯಬೇಕೇ ಹೊರತು
ಕಷ್ಟ ಪಟ್ಟು ದುಡಿಯುವವರ
ದುಡಿಮೆಯಲಿ ಬದುಕು
ದೂಡಬಾರದು
ಛಲವಿರಲಿ ಬದುಕಿನಲಿ
ದುಡಿಮೆಯಲಿ ಮನಸಿರಲಿ..!!-
ಮುಟ್ಟಿ ಮುಟ್ಟಿ ನೋಡಿ
ಆರಿಸುತ್ತಿದ್ದೆ
ಅವಳನು.!
ಮುಟ್ಟದಂತೆ
ಹಾರಿದ್ದಾಳೀಗವಳು
ಗಗನದೆತ್ತರಕೆ ....!!
ಅವಳೀಗ ಬಲು ದುಬಾರಿ !!
🍅🍅🍅🍅🍅🍅-
ಕನಸೂರಿಗೆ ತೆರೆದಿತ್ತು ಹೆಬ್ಬಾಗಿಲು
ನನಸೂರಿಗೆ ಕತ್ತಾಲವರಿಸಿದಂತಿದೆ ಹಾಡ ಹಗಲು-
ಹಿಂದೆ...ಬೀದಿಯಲ್ಲಿ
ಕೊಡದ ನೀರಿಗಾಗಿ ಕಿತ್ತಾಟ
ಈಗ ..ಬಸ್ಸಿನಲ್ಲಿ
ದುಡ್ಡು ಕೊಡ (ದ) ಸೀಟಿಗಾಗಿ ತಳ್ಳಾಟ
ಉಚಿತಗಳು ಅನುಚಿತ ವರ್ತನೆಗೆಡೆಯಾಗದಿರಲಷ್ಟೆ..!-
ಭಾವನೆಗಳ ಪೋಣಿಸಿ
ನೇಯ್ದಿಟ್ಟ ನೆನಪುಗಳು
ಕೂಡಿಕೊಂಡಾಗಿವೆ
ಹೃದಯಕೆ ಬೆಚ್ಚನೆಯ ಹೊದಿಕೆ.!!
ಬದಲಾಗುವ ತಾಪಮಾನಗಳೂ
ಮಾಡಿಕೊಂಡಿವೆ ಮನದ ಜೊತೆ ಹೊಂದಾಣಿಕೆ...!!
ಬದಲಾಯಿಸುವ ಗೋಜಿಲ್ಲ
ಮಾಸಿ ಹೋಗುವ ಭಯವಿಲ್ಲ
ಉಸಿರಿರುವ ತನಕ ಜೊತೆಗಿರುವುದು.
ಮರೆವೆಂಬುದು ಬರೀ ನೆಪ ಮಾತ್ರಕೆ..-