ಹೆಣ್ಣುಮಗಳ ಮನದ ಅಳಲು ( ಯಾಕೆ ಹೀಗೆ)
(See the caption below)-
ಹಗಲಲ್ಲಿ ಇರುಳಲ್ಲಿ ಯಾವಾಗ ಬರೀಬೇಕು ಅಂತ ಅನ್ನಿಸಿದ್ರೂ ಬರೀತೀನಿ..
ಮನಸಿ... read more
*ಆಶಯ*
ಮರುಕಳಿಸಿ ಬಂದಿದೆ ಶಕ್ತಿಯುತವಾಗಿ ನಿಂದಿದೆ
ಜೀವಕೆ ಕುತ್ತು ತಂದಿದೆ|
ಗುರಿಯಾಗಿಸಿ ಎಲ್ಲರ ಆಕ್ರಮಣವ ಮಾಡುತಿದೆ
ನರಬಲಿಯನು ನಿತ್ಯ ಕೋರುತಿದೆ||
ಮಹಾಮಾರಿ ರೋಗವು ಗಹಗಹಿಸಿ ನಗುತ
ರೌದ್ರ ತಾಂಡವ ತಾ ಆಡುತಿದೆ|
ಕುಹಕತೆ ಎಲ್ಲೆಡೆ ಅಜಾಗರೂಕತೆ ಜಗದಿ
ನಿರಾಶೆಯ ಹಾಹಾಕಾರ ತಲೆಎತ್ತಿದೆ||
ಗೆಳೆಯರೆ ಕೇಳಿರಿ ಮಾಡುವ ನಮ್ಮ ಜಾಗ್ರತೆಯ
ಧರಿಸುತ ಮುಖಗವಸನು|
ತಾಳ್ಮೆಯೊಂದೆ ಪರಿಹಾರವು ಆತ್ಮ ಸ್ಥೈರ್ಯವೆ ಮಂತ್ರ
ನಿರಂತರ ತಾಳುತ ಧೈರ್ಯವನು||
ಒಬ್ಬರ ಹೋರಾಟ ಇದಲ್ಲ ತಿಳಿಯೋ ಮನುಜನೆ
ಬೇಕು ಎಲ್ಲರ ಕಠಿಣ ಪರಿಶ್ರಮವು|
ಸಬಲರು ನಾವು ಜಗತ್ತಿನ ವಿಪತ್ತು ಕಳೆಯುತ
ಜೊತೆಯಾಗಿ ಗೆಲ್ಲುವ ಆಶಯವು||
✍🏻 *ಪದ್ಮಶ್ರೀ*-
ಮನಸ್ಸಿನ ಪುಟಗಳಲ್ಲಿ ಪ್ರೀತಿಯ ಚಿತ್ತಾರ ಬಿಡಿಸಿ ಒಲವಿನ ಬಣ್ಣಗಳನ್ನು ತುಂಬಿ ದೂರ ಹೋಗದಿರು
-
ಪ್ರೀತಿಯ ರಂಗನ್ನು ಹಚ್ಚುತ ಸುಟ್ಟು ಹೋದೆಯೇಕೆ
ಭೀತಿಯ ಕಾರಿರುಳಿನಲಿ ಮಧ್ಯೆಯೇ ಬಿಟ್ಟು ಹೋದೆಯೇಕೆ
ಮಾಸದ ಬಣ್ಣ ಬಳಿದಿರಲು ಹೇಗೆ, ಯಾವುದರಿಂದ ಒರೆಸಲಿ
ಸಾಸಿರ ನೆನಪುಗಳ ಒಸಗೆಯ ಕೊಟ್ಟು ಹೋದೆಯೇಕೆ
ಆನಂದದ ನಂದನವನದೊಳು ಬಿರುಗಾಳಿ ಬೀಸಿತೇ
ಮನದಂಗಳದಿ ಸುಂದರವಾದ ಕನಸುಗಳ ನೆಟ್ಟು ಹೋದೆಯೇಕೆ
ಹೊತ್ತು ಮೀರಲು ಒಲವಿಗೀಗ ಜಾಗವಿಲ್ಲದಾಯಿತಲ್ಲ
ಮಾತನ್ನು ಬಂಧಿಸಿ ಮೌನವನು ಉಟ್ಟು ಹೋದೆಯೇಕೆ
ಗತಿಸಿದ ದಿನಗಳು ಮರಳಿ ಬಾರದೆಂದು ಶ್ರೀಗೆ ತಿಳಿದಿದೆ
ಉತ್ತರವನೀಯದೆ ಬರಿಯ ಪ್ರಶ್ನೆಗಳನ್ನೇ ಇಟ್ಟು ಹೋದೆಯೇಕೆ
✍🏻 *ಪದ್ಮಶ್ರೀ *-
*ಭಾವಗೀತೆ*
*ಯಾನ*
ಅನುರಾಗ ಅರಳಿದೆ ಪ್ರಕೃತಿಯ ಮಡಿಲಲಿ
ಹೊಸಭಾವ ತೋರುತಲಿ|
ಮನವು ನಗುತಿದೆ ಚೆಲುವ ನೋಡುತ
ಹೂವಿನ ತೆರದಲಿ||
ಮೋಡ ಮುಸುಕಲು ನವಿಲು ನಲಿಯಿತು
ಮುಸ್ಸಂಜೆ ಹೊತ್ತಿನಲಿ|
ಹಾಡಿದ ಭಾವಗೀತೆ ಕೇಳಿ ಕುಣಿದ ಸಂಭ್ರಮ
ಗೋಧೂಳಿ ಸಮಯದಲಿ||
ಬಾಳಿನ ಒಲುಮೆಯು ಕನಸನು ಕಟ್ಟಿದೆ
ತಂಗಾಳಿಯ ಸ್ಪರ್ಶದಲಿ|
ಸೆಳೆದಿದೆ ಪ್ರೇಮಿಯ ಸಮ್ಮತಿ ಸೂಚಿಸಿ
ಬೆಸುಗೆಯ ಕೋರುತಲಿ||
ಹೃದಯವು ಮಿಡಿದಿದೆ ಶ್ರುತಿಯನು ಮೀಟಿದೆ
ದಣಿಯದ ಯಾನದಲಿ|
ಮಧುವನು ಹೀರಲು ದುಂಬಿಯು ಕಾದಿದೆ
ಮಾಧುರ್ಯದ ಹೊನಲಿನಲಿ||
ವರ್ಷದ ಧಾರೆಯು ತಂಪನು ಮಾಡಿದೆ
ಬದುಕಿನ ಪುಟಗಳಲಿ|
ಹರ್ಷವು ಉಕ್ಕಿದೆ ಛಾಪನು ಒತ್ತಿದೆ
ತಿಳಿಬಾನ ಬೀದಿಯಲಿ||-
*ಗಝಲ್*
ಭೋರ್ಗರೆವ ಮಳೆಯಂತೆ ಕಣ್ಣೀರು ಸುರಿವಾಗ ಮೌನವಾಗಿರುವೆ
ಭಾವನೆಗಳೆಲ್ಲ ರಭಸದಿ ಕೊಚ್ಚಿ ಹೋಗುವಾಗ ಸುಮ್ಮನಾಗಿರುವೆ
ಝಳಪಿಸುವ ಮಿಂಚಿನಂತೆ ಹಂಗಿನ ಮಾತುಗಳು ಕರ್ಣಗಳನಪ್ಪಳಿಸುವುದು ಸರಿಯೆ
ಒಡೆದ ಕನ್ನಡಿಯಂತಿರುವ ಮನಸ್ಸಿಂದು ಚೂರಾಗಿ ತಟಸ್ಥನಾಗಿರುವೆ
ಕಡಲಿನ ಮೊರೆತಕೆ ಕಲ್ಲು ಬಂಡೆಗಳೇ ಕರಗುವುದ ನೀನು ನೋಡದೇ ಹೋದೆಯಾ
ನೀರಿಲ್ಲದೆ ಸೊರಗಿರುವ ಮರಗಳಂತೆ ಬಾಳಿನಲಿ ಬಳಲಿ ಬೆಂಡಾಗಿರುವೆ
ರಾಗದ್ವೇಷದ ಕಾಡ್ಗಿಚ್ಚಿಗೆ ಸಂಬಂಧಗಳು ಸುಟ್ಟು ಭಸ್ಮವಾಯಿತೇಯೀಗ
ಪ್ರೀತಿಯು ಮರೀಚಿಕೆಯಾಗಿರೆ ನೆಲೆಯಿಲ್ಲದಂತೆ ಮರುಭೂಮಿಯಲಿ ಅಲೆಯುತಿರುವೆ
ಮೋಹ ದಾಹದ ಪಾಶಕ್ಕೆ ಸಿಲುಕಿ ಜೀವನವು ಕಗ್ಗಂಟಾಯಿತು ಪದ್ಮಶ್ರೀ
ಇಹಲೋಕದ ನಂಟಿಲ್ಲದ ವಿರಾಗಿನಿಯಂತೆ ಎಲ್ಲವನ್ನೂ ಇಂದು ತ್ಯಜಿಸಿರುವೆ-
ಇಡೀ ದಿನ ಬೈಗುಳದ ಮಳೆ ಸುರಿಸಿದರೂ ಸಹಿಸಬಲ್ಲೆ. ಆದರೆ ಈ ನಿನ್ನ ಮೌನವು ನನ್ಮನವನ್ನು ಹಿಂಡಿ ನೋಯಿಸುತ್ತಿದೆ. ಸಹಿಸಲಾಗುತ್ತಿಲ್ಲ ನೋವು.
-
*ಗೌರಮ್ಮಜ್ಜಿ ಆತ್ಮ*
*ತಾರತಮ್ಯ*
ಪಡಸಾಲೆಯಲ್ಲಿನ ದೊಡ್ಡ ಎಲುಬಿನ ಸಿಂಹಾಸನದಲ್ಲಿ ಕುಳಿತಿದ್ದ ಗೌರಮ್ಮಜ್ಜಿ ಆತ್ಮವು, ಕಣ್ಣಿನಿಂದ ರಕ್ತ ಸುರಿಸುತ್ತಿತ್ತು. ಮೊಮ್ಮಗಳ ಮದುವೆ ನಿಂತುಹೋಗಿತ್ತು, ಕಾರಣ ಅವಳು ಸೌಂದರ್ಯವತಿ ಆಗದೆ ಇದ್ದಿದ್ದು. ಇನ್ನೆಷ್ಟು ದಿನ ಬಣ್ಣ ತಾರತಮ್ಯ ಸಹಿಸಲಿ ಎಂದು. ಅಲ್ಲೇ ಇದ್ದ ನಾಯಿ ಮರಿ ರಕ್ತವನ್ನು ನೆಕ್ಕಿ ನೆಕ್ಕಿ ತಿಂದು ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಿತ್ತು. ಮೊಮ್ಮಗಳು ರೌದ್ರ ಮೌನವನ್ನಪ್ಪಿ ದೂರದಿಂದ ಇವುಗಳನ್ನೆಲ್ಲ ನೋಡುತ್ತಿದ್ದಳು.
-
*ತಲ ಷಟ್ಪದಿ*
*ಗೆಲುವು*
ಹಳೆಯ ನೆನಪು
ಹಲವು ಚಿಂತೆ
ಮುಳುಗಬೇಡ ಕೊರಗುತ
ಚೆಲುವ ನಿನಗೆ
ಗೆಲುವು ಸಿಗಲಿ
ಕೆಲವು ದಿನದ ಬದುಕಲಿ-
ವರ್ಷಧಾರೆ
ಇಳಿದು ಬರಲು
ನಗುವ ಮಗುವು ಪ್ರಕೃತಿ
ಹರ್ಷದಿಂದ
ಹಸಿರು ಬೆಳೆಸಿ
ನಲಿವ ಮಾತೆ ಈ ಧರಿತ್ರಿ-