ಸಾಯಿಸುತೆ ಬರೆದಿರುವ ಕೌಟುಂಬಿಕ ಕಾದಂಬರಿಯೇ ಹೇಮಾದ್ರಿ.
ಸಮಾಜದಲ್ಲಿ ಹೆಸರಾಂತ ಮನೆತನವೆನಿಸಿಕೊಂಡ ಕುಟುಂಬದ ಕಥೆಯಾಗಿದ್ದು, ಕುಟುಂಬದ ಮೌಲ್ಯ,ಸಮಾಜದ ಬಗೆಗಿನ ಕಾಳಜಿ, ಬಾಂಧವ್ಯಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ, ಕಥೆಯಲ್ಲಿ ಬರುವ ವೈದೇಹಿಯ ಸಂಸ್ಕಾರ, ರಾಜೀವನ ದೃಢತೆ, ಅಶೋಕ ಮತ್ತು ರಂಜಿನಿಯ ಪಾತ್ರಗಳು ಎಲ್ಲರಿಗೂ ಮೆಚ್ಚುಗೆ ಆಗುತ್ತವೆ, ಹಾಗೇ ದೇವಯಾನಿಯ ಹಠ ಎಷ್ಟೇಲ್ಲಾ ಅನಾಹುತಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ, ಮನುಷ್ಯ ಋಣಭಾರಕ್ಕೆ ಬಿದ್ದರೆ ಎಂತಹ ಸಂದಿಗ್ಧ ಪರಿಸ್ಥಿತಿ ಅನುಭವಿಸುತ್ತಾನೆ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಕಥೆ ನಿರೂಪಿಸುತ್ತದೆ. ಒಟ್ಟಾರೆಯಾಗಿ ಕಾದಂಬರಿ ರಾಮಾಯಣದ ಇಂಪದ ನೆನಪಿನ ಗಾಳಿಯನ್ನು ಕಥೆಯ ಮಧ್ಯ ಮಧ್ಯ ಓದುಗರಿಗೆ ನೀಡುತ್ತದೆ.-
ಭಾವನೆಗಳ ನೆನಪಿನ ಜೊತೆ ಬರಹಗಳ ಪಯಣ....😍
ಹೇಳಲಾಗದೇ ಉಳಿದ ಭಾವನೆಗಳೆಷ್ಟೋ...
ಮನದಿ ಬೇಸರದಿ ಮೂಡಿದ ಪ್ರಶ್ನೆಗಳೆಷ್ಟೋ...
ಭಾವನೆಗಳ ಬದಿಗಿಟ್ಟು ಬದುಕು ಸರಿಯುತಿದೆ...
ಉತ್ತರ ಸಿಗದ ಪ್ರಶ್ನೆಗಳ ಹೊತ್ತು ಬಾಳು ಸಾಗುತಿದೆ...-
ಭೈರಪ್ಪ ರವರ ಭಾಷಾಪ್ರಯೋಗ, ಕಾದಂಬರಿಯಲ್ಲಿ ಪಾತ್ರಗಳು ಬಂದು ಹೋಗುವ ರೀತಿ, ಕಾದಂಬರಿಯುದ್ದಕ್ಕೂ ಎರಡು ಮುಖ್ಯ ಪಾತ್ರಗಳ ನಿರೂಪಣೆ ಮತ್ತು ಅದರಲ್ಲಿನ ವಿಭಿನ್ನತೆ, ತೀಕ್ಷ್ಣ ವಿಷಯಗಳನ್ನು ಹೇಳುವಲ್ಲಿ ಸೃಷ್ಟಿಸಿರುವ ಮಾರ್ಮಿಕತೆ ಎಲ್ಲವೂ ಮಿಳಿತಗೊಂಡು ಅಲೆದಲೆದು ಓದುಗನೆದೆಗೆ ಸೀದಾ ಧುಮ್ಮಿಕ್ಕುವ ಅತಿ ಅಪರೂಪದ ಪುಸ್ತಕ "ಜಲಪಾತ". ಜೀವನದ ಕೆಲ ಗಹನವಾದ ವಿಷಯಗಳನ್ನು ಆಳವಾಗಿ ಚರ್ಚಿಸುವ ಕಾದಂಬರಿ.
ಸೃಷ್ಟಿಶಕ್ತಿಯೇ ಜೀವನದ ಮೂಲ. ಆ ಶಕ್ತಿಯೇ ಜೀವನಪ್ರವೃತ್ತಿ ಮತ್ತು ಜೀವನಪರಿಸ್ಥಿತಿಗಳ ನಡುವಿನ ತಾಕಲಾಟದ ಮೂಲವೂ ಆದರೆ? 60% ರಷ್ಟು ಕತೆ ಮುಂಬಯಿಯಲ್ಲಿ ನಡೆಯುವುದರಿಂದ, 4೦ ನೇ ದಶಕದ ಮುಂಬಯಿಯ ಜೀವನಶೈಲಿಯನ್ನು ಒಬ್ಬ ಚಿತ್ರಕಲಾವಿದನ ದೃಷ್ಟಿಕೋನದಿಂದ ಕಾಣಬಹುದು. ಮುಂಬಯಿ ಎನ್ನುವುದು ಜೀವನ ನಾಡಿಗಳನ್ನು ಆಳುವ ಹೃದಯ. ಇಂತಹ ಊರಿನಲ್ಲಿ ಚಿತ್ರ ಉಳಿಯುತ್ತದೆಯೇ? ಸಂಗೀತ ಹುಟ್ಟುತ್ತದೆಯೇ? ಪ್ರಜ್ಞೆಯು ತಲುಪದ ಯಾವುದೋ ವೈಜ್ಞಾನಿಕ ವಾದದ ಆಧಾರದ ಮೇಲೆ ನಮ್ಮ ವಿಶ್ವಾಸಗಳನ್ನು ಗಾಳಿಗೆ ತೂರಲಾಗುತ್ತದೆಯೇ? ಜೀವಸೃಷ್ಟಿಯೆಂದರೆ ದುರಂತವೇ? ಜೀವಸೃಷ್ಟಿ ಮತ್ತು ರತಿಗಳೆರಡೂ ಭಿನ್ನವಾದ ಕ್ರಿಯೆಗಳೇ? ಹೀಗೆ ಕಾದಂಬರಿಯ ಕತೆಯು, ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಹೆಣ್ಣಿನ ಸ್ವಂತ ಅನುಭವಗಳ ವರ್ಣನೆಯ ರೀತಿಯಲ್ಲಿ ಸಾಗುತ್ತದೆ. ಗರ್ಭದ ವಿಕಾಸ ಮತ್ತು ಜನನಕ್ಕೆ ಪೂರ್ವಭಾವಿಯಾದ ಗರ್ಭಿಣಿಯ ನೋವಿನ ಅನುಭವವನ್ನು ಚಿತ್ರಕಲೆಯಲ್ಲಿ ವಿವರಿಸಿರುವ ರೀತಿಯಂತೂ ಅತ್ಯದ್ಭುತ.
ಒಂದು ಕೃತಿ ಅನುಗಾಲ ಬದುಕಬೇಕು ಎಂದರೆ ಅದರಲ್ಲಿನ ವಿಷಯ ಸಾರ್ವಕಾಲಿಕವಾಗಿರಬೇಕು ಎನ್ನುವುದಕ್ಕೆ ಉತ್ತಮ ನಿದರ್ಶನ ಈ ಪುಸ್ತಕ.-
"ದಿ ಕ್ಯೂರಿಯಸ್ ಕೇಸ್ ಆಫ್ ತಾರಾಗುಪ್ತ" ಕಾದಂಬರಿ ಓದುಗರಿಗೆ ಕುತೂಹಲ ಮೂಡಿಸುತ್ತದೆ. ಪ್ರಸಿದ್ಧ ಲೇಖಕಿಯೊಬ್ಬಳು ಬರೆದ ಥ್ರೀಲರ್ ಕಾದಂಬರಿ ಮಧರ ನಗರದ ಮರ್ಡರ್ ಪುಸ್ತಕದ ಖ್ಯಾತಿಯ ತಾರಗುಪ್ತ ಬರೆದ ಡೇತ್ ನೋಟ್ ಪೇಮಸ್ ಡಿಟೆಕ್ಟಿವ್ ಹಿಮವಂತನ ಕೈಸೇರಿ ಅಲ್ಲಿಂದ ಆಂರಭವಾಗುವ ಕಥೆ, ಸೈಕೋ ಕಿಲ್ಲರ್ ನ ಸರಣಿ ಕೊಲೆಗಳು, ಡಬಲ್ ಕಿಡ್ನ್ಯಾಪ್ ಫೇಕ್ ಮರ್ಡರ್ , ಡಬಲ್ ಅಸ್ಥಿಪಂಜರ, ತಲೆ ತಿರುಗುವ ಕಥಾ ಹಂದರ ಆ ಪುಸ್ತಕದ ಘಟನೆಗಳಿಗೂ ಅಲ್ಲಿನ ನೈಜ ಘಟನೆಗಳಿಗೂ ಏಕ ಸ್ವಾಮ್ಯವಾಗಿರುತ್ತದೆ.
ಹಲವರ ಸುತ್ತ ಅನುಮಾನದ ಸುಳಿ ಸುತ್ತಿ ಆ ಘಟನೆಯ ಕೇಂದ್ರ ಬಿಂದು ರೂವಾರಿ ಯಾರೆಂಬುವುದು ತಿಳಿದಾಗ ಓದುಗರಿಗೆ ಆಶ್ಚರ್ಯ ಆಗದೇ ಇರಲಾರದು, ಒಂದು ಕಥೆಯ ಪ್ರಸಿದ್ಧಿಗೊಸ್ಕರ ಲೇಖಕಿಯೊಬ್ಬಳು ಸೈಕೋ ಕಿಲ್ಲರ್ ಆಗಬಲ್ಲಳು ಎಂಬುವುದು ಊಹಿಸಲಾಗದ ಸಂಗತಿ.-
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಒಂದು ಮರೆಯಾಲಾಗದ ಪ್ರೀತಿ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೇ ಉಳಿದುಬಿಡುತ್ತದೆ.
ಈ ಪ್ರೀತಿಗೆ ವಯಸ್ಸಿನ ಅಂತರವಿಲ್ಲ, ಜಾತಿಮತಗಳ ಮಿತಿಗಳಿಲ್ಲ ಅದರ ಆಳದ ಅಂದಾಜ ಕೂಡ ಇರುವುದಿಲ್ಲ ಅದೇ ಮಾದರಿಯಲ್ಲಿ ಮಾರೆಯಾಲಾಗದ ಭಗ್ನ ಪ್ರೇಮಕತೆಯನ್ನು ಎಂದೂ ಉಳಿಯಲಿ ಎಂಬ ಆಶಯದಿಂದ ಭಗ್ನ ಪ್ರೇಮಿಯೊಬ್ಬ ಲೇಖಕರಿಗೆ ಹೇಳಿದ ತನ್ನ ಅಪೂರ್ಣ ಡೈರಿಯ ಕಥೆಯೇ ಜೋಗಿಯವರ " ಭಗ್ನಪ್ರೇಮಿಯ ಅಪೂರ್ಣ ಡೈರಿ".-
ಶ್ರೀಮಂತಿಕೆಯ ಅಮ್ಮು-ಬಿಮ್ಮುಗಳಿಲ್ಲದೇ ದಿಟ್ಟ ಬದುಕಿನ ಚೌಕ ಕಟ್ಟಿ ನೀರಜಾ ಅವಳ ದಿಟ್ಟತನ, ಸ್ವಾಭಿಮಾನ, ಸೌಂದರ್ಯ, ಗಾಂಭೀರ್ಯ, ಅಚಲತೆ, ಬುದ್ಧಿವಂತಿಕೆ ಓದುಗರಿಗೇ ಒಂದು ಅಚ್ಚರಿಯೇ; ನಾವು ಪ್ರತಿದಿನ ಎಷ್ಟರಮಟ್ಟಿಗೆ ನಮ್ಮ ಮನಸ್ಸನ್ನು ಸಂತೋಷವಾಗಿಡಬಲ್ಲೆವೋ ಸುಖಿಗಳಾಗಿರುತ್ತೇವೆ” ಈ ಅಬ್ರಹಾಂ ಲಿಂಕನ್ ಮಾತು ಅಬ್ಬರ, ಅಟ್ಟಹಾಸಗಳಿಂದ ದೂರವಾಗಿ ನೇರವಾಗಿ ಜೀವನವನ್ನು ನೋಡುವ ಸಿತಾರ ಉರ್ಫ್ (ನೀರಜಾಳ)ನ್ನು ಕಂಡಾಗ ನೆನಪಾಗುತ್ತದೆ.
ಸಿದ್ಧಾರ್ಥ್ ನೀರಜಾಳಿಗಾಗಿ ಪರಿತಪಿಸುವ ಬಗ್ಗೆ ಅವರ ಬೆಸುಗೆಯ ಕಥೆಯೇ "ಶ್ರೀ ರುಸ್ತು ಶುಭ ಮಸ್ತು".
-
"ಧರ್ಮೇಚ ಅರ್ಥೈಚ ಕಾಮೇಚ ಮೋಕ್ಷೆಚ ನಾತಿಚರಾಮಿ" ಇದು ಹಿಂದೂ ವಿವಾಹ ವಿಧಿಯ ಮಂತ್ರಗಳಲ್ಲೊಂದು. ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ನಾವಿಬ್ಬರೂ ಎಂದಿಗೂ ಒಬ್ಬರನ್ನೊಬ್ಬರು ಅತಿಕ್ರಮಿಸುವುದಿಲ್ಲ ಎಂದು ಇದರ ಅರ್ಥವಾಗಿದೆ.ಹಿರಿಯರು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಅತ್ಯಂತ ಶ್ರೇಷ್ಠ ಸ್ಥಾನವನ್ನು ಕೊಟ್ಟಿದ್ದಾರೆ.ತನ್ನ ತಂದೆ ತಾಯಿ ಮನೆ ಊರನ್ನು ಬಿಟ್ಟು ಗಂಡನೇ ಸರ್ವಸ್ವ ಎಂದು ಬರುವ ಹೆಣ್ಣುಮಗಳು ತನ್ನ ವರ್ತನೆಯಿಂದ ಗಂಡನ ಮನೆಯನ್ನು ನಂದನವನವನ್ನಾಗಿಯೂ ಮಾಡಬಲ್ಲಳು, ಅಥವಾ ನರಕವನ್ನಾಗಿಯೂ ಮಾಡಬಲ್ಲಳು, ಅತಿಯಾದ ಆಸೆ ಮನುಷ್ಯನಿಗೆ ಯಾವತ್ತಿಗೂ ಒಳ್ಳೆಯದಲ್ಲ. ಈ ಎಲ್ಲ ವಿಷಯವನ್ನು 'ಸಾಯಿಸುತೆ'ಯವರು ತಮ್ಮ "ನಾತಿಚರಾಮಿ" ಎಂಬ ಕಾದಂಬರಿಯಲ್ಲಿ ಅತ್ಯದ್ಭುತವಾಗಿ ಹೇಳಿದ್ದಾರೆ. ತನ್ನ ಗೆಳತಿ ಮೌನಳ ವಿವಾಹದ ಕುರಿತಾಗಿ ಚರ್ಚಿಸಲು ಬಂದು ನಿಹಾರಿಕಾಳು ಸಂತೋಷನಿಗೆ ಮನಸೋಲುತ್ತಾಳೆ. ಹೇಗಾದರೂ ಮಾಡಿ ಸಂತೋಷನನ್ನು ಮದುವೆಯಾಗಬೇಕು, ವೈಭವೋಪೇತ ಜೀವನ ನಡೆಸಬೇಕು ಎಂಬ ನಿಹಾರಿಕಾಳ ದುರಾಲೋಚನೆಯ ಮಹತ್ವಾಕಾಂಕ್ಷೆ, ಕೊನೆಗೆ ಸಂತೋಷನನ್ನು ಮದುವೆಯಾಗುವುದರ ಮೂಲಕ ಅದರಲ್ಲಿ ಯಶಸ್ವಿಯಾದ ಬಗೆ ಇವೆಲ್ಲವೂ ಈ ಕಾದಂಬರಿಯಲ್ಲಿ ಮೂಡಿಬಂದಿವೆ. ನಿಹಾರಿಕಾಳ ಅತಿಯಾದ ಆಸೆ, ಸೊಸೆಯಾಗಿ ಬಂದ ನಿಹಾರಿಕಾ ಮನೆಯಲ್ಲಿ ಯಾರೊಂದಿಗೂ ಬೆರೆಯದೆ ಇದ್ದ ರೀತಿ, ಕೊನೆಗೆ "ಎತ್ತು ಏರಿಗೆ, ಕೋಣ ನೀರಿಗೆ" ಎಂಬಂತಾಗುವ ಸಂತೋಷ್ ಮತ್ತು ನಿಹಾರಿಕಾಳ ದಾಂಪತ್ಯ ಜೀವನ, ಅತ್ತಿಗೆ ಮೈದುನರ ನಡುವಿನ ಇರುವ ಮಧುರವಾದ ಸಂಬಂಧ, ಮನೆಯ ಒಗಟ್ಟುಇವೆಲ್ಲವೂ ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ಚಿತ್ರಿತವಾಗಿದೆ.
ಈಗಿನ ಪೀಳಿಗೆಯ ಬದುಕಿನ ಪರಿಪಾಠದ ಕನ್ನಡಿಯಂತಿದೆ ಪುಸ್ತಕ.-
ದೇವನೂರು ಮಹಾದೇವ ರವರು ಬರೆದಿರುವ "ಕುಸುಮ ಬಾಲೆ" ಗದ್ಯ-ಪದ್ಯಗಳ ಸಮ್ಮಿಶ್ರಣದ ಪಾಕದಲ್ಲಿ ಹದಗೊಂಡ ಗಟ್ಟಿ ಕಥೆ ಇದೆ. ಚಂದವಿದೆ, ಚಾಮರಾಜನಗರ ಕಡೆಯ ಭಾಷೆಯೂ ಅರ್ಥೈಸಿಕೊಳ್ಳಲು ಕಷ್ಟವಾಗುವುದಂತು ನಿಜ. ತುಂಬಾ ಕಡೆ ಓದಿದ್ದನ್ನೆ ಮತ್ತೆ-ಮತ್ತೆ ಓದಬೇಕಾಯಿತು.
ಲೇಖಕರು ಬಳಸಿರುವ ಕನ್ನಡ ಉಚ್ಚಾರಣೆಯ ಅರಿವಿದ್ದೂ, ಅದೇ ಉಚ್ಚಾರಣೆಯಲ್ಲಿ ಈ ಪುಸ್ತಕವನ್ನು ಗಟ್ಟಿಯಾಗಿ ಓದುವುದು ಅಥವಾ ಓದಿಸಿ ಆಲಿಸುವುದು ಓದುಗರಿಗೆ ಒಂದು ದಿವ್ಯ ಅನುಭವ.-