ಒಡಲ ಸಂಕಟವ
ಹಿಂಡಿ
ಹಾಡೊಂದ ಬಸಿದೆ
ಗುರುವೆ....
ಪದವೊಂದು
ಚಿತ್ತಾಗಿ ಉಸಿರಿಡಿದುಕೊಂಡಿದೆ.
ಈಗ
ಸಾಯುವುದು ಸಂಕಟವೋ...
ಜೀವಹೂವಿನ ಒಲವೋ....-
ಸಿರಿವಂತರ
ಮನೆ ಬಾಗಿಲಲ್ಲಿ
ಹಚ್ಚಿಟ್ಟ
ದೀಪಾವಳಿಯ ಹಣತೆಯೊಂದು
ಹಾದಿಯಲ್ಲಿ
ಜೋಡಿಲ್ಲದೆ ನಡೆವ
ಹಸುಕಂದನ
ಪಾದಗಳಿಗಂಟಿದ ನೆತ್ತರು ಕಂಡು
ಆರಿಹೋಯಿತು...-
ಎಲ್ಲರೂ
ಚಂದಿರನನ್ನು
ರೊಟ್ಟಿಯಹಾಗೆ
ಹಂಚಿಕೊಳ್ಳುತ್ತಿದ್ದಾರೆ
ಗುರುವೇ....
ನನಗೆ ಕಣ್ಣುಗಳಲ್ಲಿ
ತಿನ್ನುವುದಕ್ಕೆ ಬರದೆ
ಹೊಟ್ಟೆ ಹಿಡಿದು
ನಿಸೂರಾಗಿ ಕೂತಿದ್ದೇನೆ.-
ಮಳೆ ಬಿದ್ದ ಕಡೆಗೆಲ್ಲಾ
ಹಸಿರೆದ್ದು ನಗುತಾದೆ..
ಜೋಪಡಿಯಲ್ಲಿ
ಹಿಟ್ಟು ಬೇಸುವ ತಾಯಿ
ಸೆರಗರಿದು
ಸೋರುವಾ ಸೂರನ್ನು
ಮುಚ್ಚುತ್ತಾಳೆ....-
ಕವಿಯನ್ನು ಮಣ್ಣಿಗಿತ್ತು
ತಾಸುಗಳಾದವು.
ಈಗ ಈ ನಾಯಿಗಳು
ಊಳಿಡುವ ಹೊತ್ತಿನಲ್ಲಿ
ಅವನ ಕವಿತೆಗಳನ್ನು
ಓದೋಣವೆಂದರೆ
ಬೆರಳಿಗಂಟಿದ
ದುಕ್ಕವೇ ದೊಡ್ಡದಾಗಿದೆ...-
ಹುಯ್ಯೋ ಹುಯ್ಯೋ ಮಳೆರಾಯ
ಸಮತೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ
ಜನಗಳ ಕಣ್ಣಲಿ ಹೂಗಳು ಬಿಟ್ಟು
ಕನಸುಗಳೆಲ್ಲಾ ಕೊಳೆಯಾದೋ...-
ಇಲ್ಲಿನ ಎದೆಗಳ
ತುಂಬೆಲ್ಲಾ ಹೂಗಳ
ಹೆಣಗಳು....
ನೆಲದ ನೆತ್ತರ ವಾಸನೆ
ತೊಳೆಯಲು
ಮಾಯಾದ
ಮಳೆ ಸುರಿಸು ಗುರುವೇ..
ಬಡವರ ಬತ್ತಿದ
ಕಣ್ಣುಗಳ ತುಂಬಾ
ಕೆಂಡ ಕೆಂಡ...
-
ಎಲ್ಲದಕ್ಕೂ ಕೈಯೆತ್ತಿ
ಕಡ್ಡಿ ಹಚ್ಚುವ ಕರುಣಾಳುಗಳೆಲ್ಲಾ
ತುಂಬಿದ ತಣಿಗೆಗಳ ಎದುರು
ಕೂತು 'ಸಹವೀರ್ಯಂ ಕರವಾವಹೈ'
ಹಾಡುತ್ತಿದ್ದಾರೆ...
ಬರದ ನಾಡಿನಲ್ಲಿ
ತಾಯಿಯೊಬ್ಬಳು
ಮಾತು ನಿಲ್ಲಿಸಿದ್ದಾಳೆ.....-
ಈ ಇರುಳನ್ನೇ
ಅತ್ತಿಯಹಾಗೆ
ಎರಡೂ ಕಿವಿಗಳಿಗೆ
ತುರುಕಿಕೊಂಡರೂ
ನಿನ್ನ ನಗುವಿನ
ಸದ್ದು ಬೆಳಗಿನ
ಆಸೆ ಹುಟ್ಟಿಸುತ್ತಿದೆ ಗುರುವೇ...
ಬೆಳಗೆಂದರೆ
ಮತ್ತದೇ ನಿನ್ನ ತುಟಿಯರಳಿ
ತುಳುಕುವ
ಕಾರುಣ್ಯದೀಪ...-