Guru Kanchan✍️   (ಜಿ.ಕಾಂಚನ್)
669 Followers · 50 Following

read more
Joined 24 May 2019


read more
Joined 24 May 2019
24 JUL 2021 AT 12:04

* ಗುರುಗೆ ನಮನ *

ನನ್ನ ಅಮ್ಮನಿಗೂ ಕಲಿಸಿ,
ನನಗೂ ಕಲಿಸಿದ ಗುರು ನೀವು.
ಯಾರೂ ಕಾಣದ ನನ್ನನು ಕಂಡು,
ಬೆನ್ನು ತಟ್ಟಿದವರು ನೀವು.
ಗಣಿತದ ಮೇಲೆ ಪ್ರೀತಿ ಹುಟ್ಟಿಸಿ,
ನೂರಕ್ಕೆ ನೂರು ತೆಗೆಸಿದವರು ನೀವು.
ಕಾಲಿಗೆರಗಿದಾಗಲೆಲ್ಲ ಮೇಲೆತ್ತಿ ತಬ್ಬಿದವರು ನೀವು.
ಕಿವಿ ಹಿಂಡಿ ತಿದ್ದಿದ್ದೀರಿ,
ಕೈ ಹಿಡಿದು ನಡೆಸಿದ್ದೀರಿ.
ಅನೇಕ ನೋವು ಕೊಟ್ಟ ಈ ವರುಷ,
ನಿಮ್ಮನೂ ಕರೆದು ಕೊಂಡು ಹೋಯಿತು.
ನನ್ನ ಮದುವೆಯ ದಿನ,
ಸಂಗಾತಿಯ ನಿಮಗೆ ಪರಿಚಯಿಸಿ,
ಒಂದು ಫೋಟೋ ತೆಗೆದುಕೊಳ್ಳುವ ಆಸೆ..,
ಆಸೆಯಾಗಿಯೇ ಉಳಿಯಿತು.
ಕೊನೆಯ ಸಾರಿ ಸಿಕ್ಕಾಗ,
ಅದುವೇ ಕೊನೆಯೆಂದು ಗೊತ್ತಿದ್ದರೆ,
ನಿಮ್ಮ ಕಾಲು ಬಿಟ್ಟು ಏಳುತ್ತಲೇ ಇರಲಿಲ್ಲ.
ಮತ್ತೆ ಬನ್ನಿ
'ರಾಜು ಮೇಷ್ಟ್ರೇ..'
ನನಗೆ ದೈರ್ಯ ತುಂಬಲು.

-


17 JUN 2019 AT 19:05

ಗಂಡಸು ಅಳುವಂತಿಲ್ಲವೆಂದರು,
ಅಕ್ಷರಗಳಲೇ ಅಳುವುದ‌ ಕಲಿತೆ.
ಬೆಟ್ಟು ತೋರಿಸಿ ನಕ್ಕರು,
ನನ್ನತ್ತ ನಾನೇ ನಗುವುದು ಕಲಿತೆ.
ನೇರ ನುಡಿಗೆ ಸ್ನೇಹಿತರಿಲ್ಲವೆಂದರು,
ನಾಲ್ವರಿದ್ದರೂ ನೇರವಿರಲಿ ಎಂದುಕೊಂಡೆ.
ಅವರಿವರ ಹೆಜ್ಜೆ ಹಿಂಬಾಲಿಸೆಂದರು,
ನಿಧಾನವಾದರೂ ನನ್ನದೇ ಹೆಜ್ಜೆಯಿಡುತಿರುವೆ.

-


19 SEP 2021 AT 14:33

ಸಾವಿರದ ವಂದನೆ..,
ಮೊದಲಿನಿಂದ ಓದಿದವರಿಗೆ,
ಇಂದು ಓದುತ್ತಿರುವವರಿಗೆ,
ಮುಂದೆ ಓದುವವರಿಗೆ,
ಅಂದಿನಿಂದ ಬಂದವರಿಗೆ,
ಬಂದು ಹೋದವರಿಗೆ,
ಬರದೆ ಉಳಿದವರಿಗೆ,
ಮನತುಂಬಿ ಮೆಚ್ಚಿದವರಿಗೆ,
ಮನದಲ್ಲೇ ಉಳಿದವರಿಗೆ,
ಮರೆಯಾಗಿ ಹೋದವರಿಗೆ,
ಬರಹಕ್ಕೆ ಸ್ಪೂರ್ತಿ ತುಂಬಿದವರಿಗೆ,
ಬರಹದ ಪೂರ್ತಿ ತುಂಬಿದ್ದವರಿಗೆ,
ಹೊಸ ಪದಗಳ ಕೊಟ್ಟವರಿಗೆ,
ಹೊಸ ಪಾದವ ಬೆಳೆಸಿದವರಿಗೆ,
ಖುಷಿಯ ಕೊಟ್ಟವರಿಗೆ,
ಖುಷಿಯ ಪಟ್ಟವರಿಗೆ,
ಈ ಬರಹ ಚಪಲಗಾರನ,
ಸಾವು ಇರದ,
ಸಾವಿರದ ವಂದನೆ 🙏💐

-


19 SEP 2021 AT 13:45

ಒಂದು ಮಾತು..
ಸ್ವಲ್ಪ ಗಮನವಿರಲಿ,
ನಿನ್ನ ಸುತ್ತಲಿರುವ ಜನರ ಬಗ್ಗೆ,
ನಿನ್ನ ಬೆಳಕಲ್ಲಿರುವ ಕತ್ತಲೆ ಬಗ್ಗೆ,
ನಿನ್ನ ಶುಭ್ರತೆಗೆ ಇಣುಕೊ ಕೊಳಕಿನ ಬಗ್ಗೆ,
ನಿನ್ನ ನಗು ಕೊರೆವ ಬೆಟ್ಟದಿಲಿಗಳ ಬಗ್ಗೆ,
ನಿನ್ನ ಖುಷಿ ಕದಿವ ಹುಟ್ಟು ನರಿಗಳ ಬಗ್ಗೆ.
ಸಿಹಿ ಇರುವುದೆಲ್ಲಾ ಕಬ್ಬಲ್ಲ,
ಕಲ್ಲು ಕಲ್ಲುಸಕ್ಕರೆಯಂತೆ ಕರಗಲ್ಲ.
ಸಹಿ ಹಾಕಿದ್ದೆಲ್ಲಾ ನಮ್ಮದಲ್ಲ,
ಪಾದ ಪದೇಪದೆ ಓಡಾಡಿದಲ್ಲಿ ಗರಿಕೆ ಬೆಳೆಯಲ್ಲ.
ಕಾಯದ ಹೆಂಚಲ್ಲಿ ದೋಸೆ ಬೇಯಲ್ಲ,
ಕಾದ ಕಾಯಿ ಹಣ್ಣಾಗಲೇ ಬೇಕಲ್ಲ.
ಕಲ್ಲು ಒಡೆವಲ್ಲಿ ಕನ್ನಡಿ ಸುರಕ್ಷಿತವಲ್ಲ,
ಖಾಲಿ ಪುಸ್ತಕಕೆ ಮುನ್ನುಡಿ ಬರೆಯಲ್ಲ.
ಸ್ವಲ್ಪ ಗಮನವಿರಲಿ..
ಸುಮ್ಮನೆ ಹೀಗೇ ಒಂದು ಮಾತು.

-


18 SEP 2021 AT 20:38

YQ ಗೆ ಬಂದು ಕೆಲವೇ ತಿಂಗಳುಗಳಲ್ಲಿ,
ಆರು ನೂರರ ಗಡಿಯಲ್ಲಿರುವ,
ನಿಮ್ಮ ಬರಹಗಳ ಹಣತೆ ಆರದಿರಲಿ.
ನಿಮ್ಮ ಹೆಸರೇ ಹೇಳುತಿದೆ,
ನಿಮಗಾಗಿಯೇ ಇದೆ ಈ ವೇದಿಕೆ.
ನೀವೇ ಹಿಡಿದಿರುವ ಲೇಖನಿ,
ಹೆಚ್ಚಿಸಲಿ ಖಾಲಿ ಹಾಳೆಯ ಬಾಳಿಕೆ.
ಕುಂದಾಪ್ರ ಕನ್ನಡದ ಮನಕೆ,
ಪಠ್ಯ ಕನ್ನಡದ ಬೆರಕೆ,
ಮುಂದುವರಿಯಲೆನ್ನುವುದೇ ಹರಕೆ.

-


17 SEP 2021 AT 20:35

ನನ್ನೊಳಗೊಬ್ಬ ವಿರಹಿ..,
ಮಾಳಿಗೆಯ ನಗು ಏಟಕುವಷ್ಟರಲ್ಲಿ,
ಕಾಲದ ಬಾಳೆಸಿಪ್ಪೆ ಕಾಲಡಿ ಎಸೆದು ಬಿಡುವ.
ಮರೆವಿನ ಕಂಬಳಿ ಮುಚ್ಚಿ ನಿದ್ದೆಗೆ ಜಾರುವಷ್ಟರಲ್ಲಿ,
ಭಾವ ಬತ್ತಳಿಕೆಯ ಬಾಣ ಚುಚ್ಚಿ ಬಿಡುವ.
ಹೊಸ ನಾಳೆಗೆ ಗಾಳ ಹಾಕುವಷ್ಟರಲ್ಲಿ,
ಹಳೆಗಾಯದ ಕಲ್ಲೆಸೆದು ಕದಡಿ ಬಿಡುವ.
ಸಮಾಧಾನದ ಸ್ನಾನ ಮುಗಿಸಿ ಮೈ ಒಣಗುವಷ್ಟರಲ್ಲಿ,
ಸಿಗದ ಕನಸಿನ ರಾಡಿ ರಾಚಿ ಬಿಡುವ.
ಹರುಷದ ಹಪ್ಪಳ ಅಂಗಳದಲಿ ಹರವುದರಷ್ಟರಲ್ಲಿ,
ನೆನಪಿನ ಕಾಗೆಯ ಕೂಗಿ ಕರೆದೇ ಬಿಡುವ.
ಭೂತಕಾಲದ ಬಾಗಿಲು ಮುಚ್ಚುವಷ್ಟರಲ್ಲಿ,
ಕಳೆದ ಸಿಹಿ ಕ್ಷಣದ ಕಾಲು ಅಡ್ಡ ಇಡುವ.
ನನ್ನ ಪಾಡಿಗೆ ನಾನಿರಲು ಬಿಡದೆ..
ಬೆನ್ನು ಹತ್ತಿರುವ..,
ನನ್ನೊಳಗೊಬ್ಬ ವಿರಹಿ !

-


16 SEP 2021 AT 11:24

ರಿಂಗಣಿಸೋ
ನಿನ್ನ ನಗುವಿನ ಇಂಚರವ,
ಅಕ್ಕಸಾಲಿಗನಿಗೆ ಕೊಟ್ಟು,
ಚಿಕ್ಕದೊಂದು ಜುಮುಕಿ ಮಾಡಿಸಿರುವೆನು.
ರಂಗಾದ ಸಂಜೆಯಲಿ,
ಊರ ಕೆರೆದಂಡೆ ಮೇಲೆ,
ನೀ ಬಿಟ್ಟುಹೋದ ಪ್ರತಿಬಿಂಬಕೆ,
ಜುಮುಕಿ ತೊಡಿಸಿ ಚೆಂದ ನೋಡುತ್ತಿರುವೆನು.

ಪ್ರತಿಧ್ವನಿಸೋ,
ನಿನ್ನ ತರಲೆ ಮಾತುಗಳ,
ನಾಜೂಕಾಗಿ ಪೋಣಿಸಲು ಹೇಳಿ,
ಮಜಬೂತಾದ ಗೆಜ್ಜೆಯನ್ನೂ ಮಾಡಿಸಿರುವೆನು.
ಜೊತೆ ನೆಡೆದ,
ಕಡಲ ತೀರದ ಮೇಲೆ,
ನೀ ಬಿಟ್ಟುಹೋದ ಹೆಜ್ಜೆಗೆ,
ಗೆಜ್ಜೆ ತೊಡಿಸಿ ಕಿವಿಗೊಟ್ಟು ಮಾತನಾಡುತ್ತಿರುವೆನು.

-


15 SEP 2021 AT 11:11

ತಂತ್ರಜ್ಞಾನದಿಂದ,
ಕೆಟ್ಟ ಪರಿಣಾಮಗಳು,
ಸಾಕಷ್ಟು ಆಗಿದ್ದರೂ..
ಒಳ್ಳೆಯ ಬೆಳವಣಿಗೆಗಳು,
ಲೆಕ್ಕವಿಲ್ಲದಷ್ಟು ಆಗಿವೆ.
ಅದರಲ್ಲಿ,
ಅಭಿಯಂತರರ ಪಾಲು,
ಬಹುದೊಡ್ಡದು.
ಆ,
ಬಹುದೊಡ್ಡ ಸಾಗರದಲ್ಲಿ,
ನಾನೂ ಒಂದು ಹನಿ,
ಎನ್ನುವುದರಲ್ಲಿ,
ಹೆಮ್ಮೆಯಿದೆ.
ವಿಶ್ವೇಶ್ವರಯ್ಯನವರ ಹೆಸರಲ್ಲಿ,
ನಡೆವ ಈ
ಆವಿಷ್ಕಾರಗಳ ಹಬ್ಬಕ್ಕೆ,
ನಿಮಗೂ ಶುಭಾಶಯಗಳು 💐

-


14 SEP 2021 AT 20:43

ಆಕೆ,
ಇತ್ತೀಚೆಗೆ ಯಾಕೋ ಮೊದಲಿನಂತಿಲ್ಲ !
ಸ್ವಾಭಿಮಾನದ ಬಾವುಟವ ಎತ್ತಿ ಹಿಡಿದವಳು,
ಶೋಕಿ ಮಾಡುವವರಿಗೆ ಬಾವುಟವ ಮಾರಿಬಿಟ್ಟಳು.
ಕಲಿತ ಕಲೆಗಳ ಬಗ್ಗೆ ಹೆಮ್ಮೆ ಪಟ್ಟವಳು,
ಕಾಲಹರಣದ ಕಲ್ಲಡಿಯಲ್ಲಿ ಕಲೆಗಳ ಮುಚ್ಚಿಟ್ಟಳು.
ಅಲ್ಪಾಯುಷಿ ಕೋಪದಲಿ ಮುದ್ದಾಗಿದ್ದವಳು,
ಅಲ್ಪರಿಂದ ವಿತಂಡ ಕೋಪ ಕಲಿತಳು.
ಮನಬಿಚ್ಚಿ ಕಲ್ಲು ಕರಗುವ ಮಾತಾದವಳು,
ಮನಚುಚ್ಚೊ ಮಾತ‌ ಕರಗತ ಮಾಡಿಕೊಂಡಳು.
ಹೌದು,
ಆಕೆ..
ಇತ್ತೀಚೆಗೆ ಯಾಕೋ ಮೊದಲಿನಂತಿಲ್ಲ!
ನಾ ಇಷ್ಟಪಟ್ಟ ಹುಡುಗಿ,
ನನಗೂ ಸಿಗಲಿಲ್ಲ,
ಆಕೆಗೂ ಸಿಗಲಿಲ್ಲ !!

-


13 SEP 2021 AT 11:13

ಹೀಗೊಂದು ಸಂಭಾಷಣೆ
(ಅಡಿಬರಹ ಓದಿ)

-


Fetching Guru Kanchan✍️ Quotes