ಹೀಗೊಂದು ಸಂಭಾಷಣೆ
(ಅಡಿಬರಹ ಓದಿ)-
* ಗುರುಗೆ ನಮನ *
ನನ್ನ ಅಮ್ಮನಿಗೂ ಕಲಿಸಿ,
ನನಗೂ ಕಲಿಸಿದ ಗುರು ನೀವು.
ಯಾರೂ ಕಾಣದ ನನ್ನನು ಕಂಡು,
ಬೆನ್ನು ತಟ್ಟಿದವರು ನೀವು.
ಗಣಿತದ ಮೇಲೆ ಪ್ರೀತಿ ಹುಟ್ಟಿಸಿ,
ನೂರಕ್ಕೆ ನೂರು ತೆಗೆಸಿದವರು ನೀವು.
ಕಾಲಿಗೆರಗಿದಾಗಲೆಲ್ಲ ಮೇಲೆತ್ತಿ ತಬ್ಬಿದವರು ನೀವು.
ಕಿವಿ ಹಿಂಡಿ ತಿದ್ದಿದ್ದೀರಿ,
ಕೈ ಹಿಡಿದು ನಡೆಸಿದ್ದೀರಿ.
ಅನೇಕ ನೋವು ಕೊಟ್ಟ ಈ ವರುಷ,
ನಿಮ್ಮನೂ ಕರೆದು ಕೊಂಡು ಹೋಯಿತು.
ನನ್ನ ಮದುವೆಯ ದಿನ,
ಸಂಗಾತಿಯ ನಿಮಗೆ ಪರಿಚಯಿಸಿ,
ಒಂದು ಫೋಟೋ ತೆಗೆದುಕೊಳ್ಳುವ ಆಸೆ..,
ಆಸೆಯಾಗಿಯೇ ಉಳಿಯಿತು.
ಕೊನೆಯ ಸಾರಿ ಸಿಕ್ಕಾಗ,
ಅದುವೇ ಕೊನೆಯೆಂದು ಗೊತ್ತಿದ್ದರೆ,
ನಿಮ್ಮ ಕಾಲು ಬಿಟ್ಟು ಏಳುತ್ತಲೇ ಇರಲಿಲ್ಲ.
ಮತ್ತೆ ಬನ್ನಿ
'ರಾಜು ಮೇಷ್ಟ್ರೇ..'
ನನಗೆ ದೈರ್ಯ ತುಂಬಲು.-
ನಿನ್ನಿಂದ ಹುಟ್ಟಿದ,
ತಂತ್ರಜ್ಞಾನ,
ನಿನ್ನನೇ ಬದಲಿಸುತ್ತಿದೆ..
ಹೇಗಿದೆ ಜೀವನ?-
ರಾತ್ರಿ ಓಡೋ ಕುದುರೆಯಿದು,
ರತಿ ಮನ್ಮಥರ ನಡುವೆ.
ದಾರಿ ಮರೆಯದ ಓಟವಿದು,
ಮುಚ್ಚಿದ ಕಣ್ಣ ಒಡನೆ.
ಸಮ ನೆಲದ ಮೈದಾನವೇನಲ್ಲ,
ಸಾಗೋ ವೇಗಕೆ ಅಡ್ಡಿಯೇನಿಲ್ಲ.
ಸಮಬಲದ ಹೋರಾಟವೇನಲ್ಲ,
ಆದರೂ ಸೋಲು ಸುಳಿದಿಲ್ಲ.
ಕಾಮದ ಕಟಕಟೆಯಲ್ಲಿ,
ಪರಿಶ್ರಮವ ನಿಲ್ಲಿಸಿ,
ಬೆವರು ಸಾಕ್ಷಿ ಹೇಳಿದೆ.
ಶಾಖದ ಗುದ್ದಾಟದಲ್ಲಿ,
ಶೇಖರಿಸಿಟ್ಟ ಆಸೆ ಹರಿದು,
ಸುಖದ ಕತೆ ಬರೆದಿದೆ.
ರಾತ್ರಿ ಓಡೋ ಕುದುರೆಯಿದು,
ಲಗಾಮು ಮರೆತು ಮೆರೆದಿದೆ.-
ಗಂಡಸು ಅಳುವಂತಿಲ್ಲವೆಂದರು,
ಅಕ್ಷರಗಳಲೇ ಅಳುವುದ ಕಲಿತೆ.
ಬೆಟ್ಟು ತೋರಿಸಿ ನಕ್ಕರು,
ನನ್ನತ್ತ ನಾನೇ ನಗುವುದು ಕಲಿತೆ.
ನೇರ ನುಡಿಗೆ ಸ್ನೇಹಿತರಿಲ್ಲವೆಂದರು,
ನಾಲ್ವರಿದ್ದರೂ ನೇರವಿರಲಿ ಎಂದುಕೊಂಡೆ.
ಅವರಿವರ ಹೆಜ್ಜೆ ಹಿಂಬಾಲಿಸೆಂದರು,
ನಿಧಾನವಾದರೂ ನನ್ನದೇ ಹೆಜ್ಜೆಯಿಡುತಿರುವೆ.-
ಸಾವಿರದ ವಂದನೆ..,
ಮೊದಲಿನಿಂದ ಓದಿದವರಿಗೆ,
ಇಂದು ಓದುತ್ತಿರುವವರಿಗೆ,
ಮುಂದೆ ಓದುವವರಿಗೆ,
ಅಂದಿನಿಂದ ಬಂದವರಿಗೆ,
ಬಂದು ಹೋದವರಿಗೆ,
ಬರದೆ ಉಳಿದವರಿಗೆ,
ಮನತುಂಬಿ ಮೆಚ್ಚಿದವರಿಗೆ,
ಮನದಲ್ಲೇ ಉಳಿದವರಿಗೆ,
ಮರೆಯಾಗಿ ಹೋದವರಿಗೆ,
ಬರಹಕ್ಕೆ ಸ್ಪೂರ್ತಿ ತುಂಬಿದವರಿಗೆ,
ಬರಹದ ಪೂರ್ತಿ ತುಂಬಿದ್ದವರಿಗೆ,
ಹೊಸ ಪದಗಳ ಕೊಟ್ಟವರಿಗೆ,
ಹೊಸ ಪಾದವ ಬೆಳೆಸಿದವರಿಗೆ,
ಖುಷಿಯ ಕೊಟ್ಟವರಿಗೆ,
ಖುಷಿಯ ಪಟ್ಟವರಿಗೆ,
ಈ ಬರಹ ಚಪಲಗಾರನ,
ಸಾವು ಇರದ,
ಸಾವಿರದ ವಂದನೆ 🙏💐-
ಒಂದು ಮಾತು..
ಸ್ವಲ್ಪ ಗಮನವಿರಲಿ,
ನಿನ್ನ ಸುತ್ತಲಿರುವ ಜನರ ಬಗ್ಗೆ,
ನಿನ್ನ ಬೆಳಕಲ್ಲಿರುವ ಕತ್ತಲೆ ಬಗ್ಗೆ,
ನಿನ್ನ ಶುಭ್ರತೆಗೆ ಇಣುಕೊ ಕೊಳಕಿನ ಬಗ್ಗೆ,
ನಿನ್ನ ನಗು ಕೊರೆವ ಬೆಟ್ಟದಿಲಿಗಳ ಬಗ್ಗೆ,
ನಿನ್ನ ಖುಷಿ ಕದಿವ ಹುಟ್ಟು ನರಿಗಳ ಬಗ್ಗೆ.
ಸಿಹಿ ಇರುವುದೆಲ್ಲಾ ಕಬ್ಬಲ್ಲ,
ಕಲ್ಲು ಕಲ್ಲುಸಕ್ಕರೆಯಂತೆ ಕರಗಲ್ಲ.
ಸಹಿ ಹಾಕಿದ್ದೆಲ್ಲಾ ನಮ್ಮದಲ್ಲ,
ಪಾದ ಪದೇಪದೆ ಓಡಾಡಿದಲ್ಲಿ ಗರಿಕೆ ಬೆಳೆಯಲ್ಲ.
ಕಾಯದ ಹೆಂಚಲ್ಲಿ ದೋಸೆ ಬೇಯಲ್ಲ,
ಕಾದ ಕಾಯಿ ಹಣ್ಣಾಗಲೇ ಬೇಕಲ್ಲ.
ಕಲ್ಲು ಒಡೆವಲ್ಲಿ ಕನ್ನಡಿ ಸುರಕ್ಷಿತವಲ್ಲ,
ಖಾಲಿ ಪುಸ್ತಕಕೆ ಮುನ್ನುಡಿ ಬರೆಯಲ್ಲ.
ಸ್ವಲ್ಪ ಗಮನವಿರಲಿ..
ಸುಮ್ಮನೆ ಹೀಗೇ ಒಂದು ಮಾತು.-
YQ ಗೆ ಬಂದು ಕೆಲವೇ ತಿಂಗಳುಗಳಲ್ಲಿ,
ಆರು ನೂರರ ಗಡಿಯಲ್ಲಿರುವ,
ನಿಮ್ಮ ಬರಹಗಳ ಹಣತೆ ಆರದಿರಲಿ.
ನಿಮ್ಮ ಹೆಸರೇ ಹೇಳುತಿದೆ,
ನಿಮಗಾಗಿಯೇ ಇದೆ ಈ ವೇದಿಕೆ.
ನೀವೇ ಹಿಡಿದಿರುವ ಲೇಖನಿ,
ಹೆಚ್ಚಿಸಲಿ ಖಾಲಿ ಹಾಳೆಯ ಬಾಳಿಕೆ.
ಕುಂದಾಪ್ರ ಕನ್ನಡದ ಮನಕೆ,
ಪಠ್ಯ ಕನ್ನಡದ ಬೆರಕೆ,
ಮುಂದುವರಿಯಲೆನ್ನುವುದೇ ಹರಕೆ.-