ಏನೇ ಓದಲಿ, ಕೇಳಲಿ, ನೋಡಲಿ
ನನ್ನನ್ನು ಪ್ರಮುಖವಾಗಿ ಸೆಳೆಯುವುದು
ಅದರ ಭಾವನಾತ್ಮಕ ಒಳನೋಟ ಮಾತ್ರ!-
ಒಳ್ಳೆಯರು ಕೆಟ್ಟವರು ಎಂದು ಯಾರನ್ನೂ ದೂರಲಾಗದು.
ಆಯಾ ಸಂದರ್ಭಗಳಿಗೆ ಅವರುಗಳು ವರ್ತಿಸಿರುವ
ರೀತಿಯಷ್ಟೇ ಅದು!
ಸಂದರ್ಭವೊಂದು ಇವರು ಕೆಟ್ಟದಾಗಿ ನಡೆದುಕೊಳ್ಳುವಂತೆ
ಮಾಡಿತೆಂಬ ಅನುಕಂಪವು ನಮ್ಮಲ್ಲಿ ಮೂಡಿದರೆ,
ನಮ್ಮ ಮನಸ್ಸು ನೋಯುವುದೂ ಇಲ್ಲ;
ಪ್ರತಿಕಾರದ ದಳ್ಳುರಿಯಲ್ಲಿ ಬೇಯುವುದೂ ಇಲ್ಲ!-
ನಿನ್ನ ನೋವ ನಾ
ಪಡೆಯಲಾರೆನಾದರೂ,
ನಿನ್ನ ನೋವಿನ ಪ್ರತಿಬಿಂದುವೂ
ನನ್ನ ಕಣ್ಣುಗಳಲ್ಲಿ ಹನಿಯಾಗಿ
ಉದುರುವುದು!-
ಕಥೆಗಾರ ತಾನು ಅನುಭವಿಸಿ ಹೇಳದಿದ್ದರೆ,
ಓದುಗನಿಗೂ ಅನುಭವಕ್ಕೆ ಬಾರದು.
ಬರೆಯುವಾಗ ಕಥೆಗಾರನನ್ನು
ಭಾವುಕಗೊಳಿಸಿದ ಸಾಲುಗಳಷ್ಟೇ
ಓದುಗನ ಮನಸ್ಸನ್ನು
ತಳಮಳಗೊಳಿಸಬಲ್ಲದು!-
ನಿನ್ನ ಮುನಿಸನ್ನೂ ನಾನು ಬಯಸುವೆ;
ಏಕೆಂದರೆ, ಅದರ ನಂತರ ಪ್ರವಾಹದಂತೆ ಹರಿವ
ನಿನ್ನ ಪ್ರೇಮದ ನಶೆ ಎಂತಹುದೆಂಬ
ಅನುಭವ ನನಗಿದೆ!-
ಮಿತಿಗಳೇನೇ ಇರಲಿ,
ಕನಸುಗಳು ಕಿರಿದಾಗಬೇಕಿಲ್ಲ!
ವಾಸ್ತವಕ್ಕೂ ಕನಸಿಗೂ
ಇರುವ ಅಂತರವನ್ನು
ತೊಡೆದುಹಾಕಲು
ಪರಿಶ್ರಮವೆಂಬ ಮಾರ್ಗ
ಇದ್ದೇ ಇದೆ!-
ಗೆದ್ದಾಗ ಅಸೂಯೆ ಪಡದ,
ಸೋತಾಗ ಬೆನ್ನು ತಿರುಗಿಸದ,
ನಗುವಾಗ ಜೊತೆಯಾಗುವ,
ಅಳುವಾಗ ಸಂತೈಸುವ
ಗೆಳೆಯರಿರುವ ಸ್ನೇಹಲೋಕವೇ ಸಾಕು!
ಕಿನ್ನರ ಗಂಧರ್ವ ದೇವಲೋಕಗಳೇಕೆ ಬೇಕು?
ವಿಶ್ವ ಸ್ನೇಹದಿನದ ಶುಭಾಶಯಗಳು.-
ನಾಸ್ತಿಕ ಎಲ್ಲ ಚಿಂತೆಗಳ ಭಾರವನ್ನೂ
ಹೊತ್ತು ಕಂಗಾಲಾಗುವ;
ಆಸ್ತಿಕ ತನ್ನೆಲ್ಲಾ ಹೊರೆಯ ಭಗವಂತನ
ಪಾದದಡಿಯಿಟ್ಟು ನೆಮ್ಮದಿಯಿಂದ ಮಲಗುವ!
ನಾಸ್ತಿಕನಿಗೆ ಮನುಷ್ಯ ಪ್ರಯತ್ನದಲ್ಲಿ ವಿಶ್ವಾಸ;
ಆಸ್ತಿಕನಿಗೆ ದೈವಬಲದಲ್ಲಿ ನಂಬಿಕೆ!
ಮನುಷ್ಯ ಪ್ರಯತ್ನದೊಂದಿಗೆ,
ಅಗೋಚರ ಶಕ್ತಿಯ ಮೇಲಿಷ್ಟು
ನಂಬಿಕೆಯೂ ಇರಲೇಳು..,
ಕುಸಿಯದೇ ಮುನ್ನುಗ್ಗಲು
ಆತ್ಮಸ್ಥೈರ್ಯ ದೊರಕುವಂತಿದ್ದರೆ..!-
ಕಲೆಗೆ ಚೌಕಟ್ಟೆಂಬುದಿಲ್ಲ.
ಯಾರನ್ನು ಯಾರೂ ನಕಲು
ಮಾಡಲೂ ಸಾಧ್ಯವಿಲ್ಲ.
ಹೇಗೆ ನಡೆದರೂ, ಕಲಾವಿದನೊಬ್ಬನ
ಕಲ್ಪನೆ ಹಾಗೂ ಭಾವಸ್ಪರ್ಶದಿಂದ
ಅದೊಂದು ಭಿನ್ನ ಕಲಾಕೃತಿಯೇ
ಆಗುವುದು!-