ಕಲ್ಲಲ್ಲಿ ಕಂಡಾಗ ವರಾಹ ಎಂದು ಹೆಸರಿಸಿ ಪೂಜಿಸುತ್ತಾರೆ,
ಕಾಡಲ್ಲಿ ಕಂಡಾಗ ಹಂದಿ ಎಂದು ಹೆಸರಿಸಿ ಭುಜಿಸುತ್ತಾರೆ..!
ತುಂಬಾ ವಿಚಿತ್ರ ಈ ಮನುಷ್ಯರು..-
ಆಂತರಿಕ ಅನ್ವೇಷಕ
ಸರ್ವಂ ಶ್ರೀಕೃಷ್ಣಾರ್ಪಣಮಸ್ತು..
ಹಸಿವೇ ಆಗದ ವಿಗ್ರಹಕ್ಕೆ ಮೃಷ್ಟಾನ್ನ ನೀಡುವರು,
ಹಸಿದ ಜೀವಿಗಳಿಗೆ ಒಂದು ತುತ್ತನ್ನೂ ನೀಡರು..!-
ದೇಶದಲ್ಲಿ ಯುದ್ಧಗಳು ನಿಲ್ಲಬೇಕು..
ಅದಕ್ಕೂ ಮೊದಲು,
ಮನೆಗಳಲ್ಲಿ ಯುದ್ಧಗಳು ನಿಲ್ಲಬೇಕು..
ಅದಕ್ಕೂ ಮೊದಲು,
ಮನಗಳಲ್ಲಿ ಯುದ್ಧಗಳು ನಿಲ್ಲಬೇಕು..!-
ಪರಿಚಿತ: ಜಾತಿ ಪದ್ಧತಿ ನಿರ್ಮೂಲನೆಗೆ ಸಂಘಟನೆ ಕಟ್ಟುತ್ತಿದ್ದೇವೆ..
ನಾನು: ನಾನೂ ಸೇರಲೇ..?
ಪರಿಚಿತ: ಇಲ್ಲ, ಕೇವಲ ಒಂದು ಜಾತಿಯ ಜನರಿಗೆ ಮಾತ್ರ ಅವಕಾಶ..!-
ಸತ್ತವರ ಆತ್ಮಕ್ಕೆ ಶಾಂತಿ ಕೋರಬೇಕಂತೆ ಗಾಲಿಬ್,
ಶಾಂತಿಯಿಂದ ಬದುಕಲು ಬಿಟ್ಟಿದ್ದರೆ ಸಾಕಿತ್ತು..!-
ಸಜ್ಜನರೂ ಯಾರಿಗೂ ಬೇಕಿಲ್ಲ,
ದುರ್ಜನರೂ ಯಾರಿಗೂ ಬೇಕಿಲ್ಲ..
ಬಹುತೇಕರಿಗೆ ಬೇಕಿರುವುದು ಎಡಬಿಡಂಗಿಗಳೇ..!-
ಮೇಲೇರುವುದನ್ನು ಕಲಿಯಬೇಕು ಗಾಲಿಬ್,
ಜಾತಿ,ಕುಲ,ಮತ,ಕಪ್ಪು-ಬಿಳುಪುಗಳನ್ನು ಕೆಳಗೆಯೇ ಬಿಟ್ಟು..-
ಪರಿಚಿತರೊಬ್ಬರು ಕೇಳಿದರು "ಏನೆಲ್ಲಾ ಆಸ್ತಿ ಮಾಡಿದ್ದೀಯ?",
ನಾ ಹೇಳಿದೆ "ಆರೋಗ್ಯಕರ ದೇಹ, ಕೇಡು ಬಯಸದ ಮನಸ್ಸು, ಪ್ರೀತಿ ತುಂಬಿದ ಹೃದಯ ಮತ್ತು ಹೃದಯದಲ್ಲಿ ನನ್ನನ್ನು ತುಂಬಿಕೊಂಡ ಕೆಲವು ಜೀವಗಳು"..!-
ಹೊಗೆಯಾಡುತ್ತಿದ್ದ ಸಂಬಂಧಗಳನ್ನು ಸುಟ್ಟು ಭಸ್ಮವಾಗಿಸಿದ್ದೇನೆ ಗಾಲಿಬ್,
ಹೊಗೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅರಿತು..-
ನಮ್ಮಿಂದಲೇ ಜಗತ್ತು ನಡೆಯುತ್ತಿದೆ ಎಂದು ಬೀಗುವ ಮನುಜರಿದ್ದಾರೆ ಗಾಲಿಬ್,
ಅವರಿಗೇನು ಗೊತ್ತು ಮನುಷ್ಯರಿದ್ದರೂ ಇರದಿದ್ದರೂ
ಬೀಸುವ ಗಾಳಿ, ಹರಿಯುವ ನದಿ, ಬೆಳಗುವ ಸೂರ್ಯ, ತಿರುಗುವ ಭೂಮಿ.. ಎಂದಿನಂತೆಯೇ ಇರುತ್ತವೆ ಎಂದು..!-