ಕ್ವಿಂಟಾಲ್ ಅಕ್ಕಿಯಲ್ಲಿನ ಕೇವಲ ಕಲ್ಲು,
ಇದ್ದೆಲ್ಲವನ್ನೂ ಇಲ್ಲವೆನಿಸುವಂತೆ ತೋರುವ ಗೀಳಿನ ಕೂಳು!-
ಸಾವಿನ ನೆನಪಾದಾಗಲೆಲ್ಲ
ಆಕಾಶವೇರಿರುವ ಮನ,
ಕಾಲ ಬುಡಕಿಳಿದು, ತಳಸೇರಿ
ನೆಲದಲ್ಲಿ ಹೂತುಹೋಗುವುದೆಂಬಂತೆ
ಚಡಪಡಿಸುತ್ತದೆ ಅಪೂರ್ವಾ,
ಮರೆತಾಗ ಮದಕ್ಕೆ ಲಗಾಮೆಳೆಯುವುದು
ಮರೆಯದಿರೊಳಿತು....-
ಜೀವನದಲ್ಲಿ ಎದುರಿಸಿದ ಕಹಿಯನ್ನು ಮರೆತು, ಬದುಕಬಲ್ಲವನು.
ಕಹಿಯುಣಿಸಿದವರನ್ನು ಕ್ಷಮಿಸಿ, ಏಕಾಂಗಿಯಾದರೂ ಮುಂದೆ ಸಾಗಬಲ್ಲವನು!-
ಆಡಿಕೊಂಡು ನಗುವವರು ಬುಡದಲ್ಲೇ
ಇರುವಾಗ,
ಯಾರಲ್ಲಿ ಹೇಳಿಕೊಂಡು ಅಳಲಿ?
ಎಂಬಂತೆ ಬೇಲಿಯೊಳಗೆ ಬದುಕು
ಕಟ್ಟಿರುವೆ,
ಹತ್ತಿರದವರಿಗೂ ಹುತ್ತದ ಒಳಗಿರುವಂತೆ!
-
ಅವನ ಹೃದಯ ತಾಕುವಷ್ಟು ಗಹನವಾಗಿ
ಕಚಗುಳಿಯಿಡುವಷ್ಟು ಹಗುರವಾಗಿ
ಮರೆಯದಷ್ಟು ಮೃದುವಾಗಿ
ಚಿರಕಾಲ ಉಳಿಯುವಾಸೆ....
ಮನಸ ಮಾತಿನ ಮಹಲೊಳಗೆ
ನೆಲಮಾಳಿಗೆ ಕಟ್ಟಿ ವಾಸಿಸುವಾಸೆ!
ಲೋಕ, ಲೆಕ್ಕವೆಂಬುದೇ ಮರೆತು,
ಅವನ ಕಣ್ಣಭಾಷೆಯನ್ನು ಅನುವಾದಿಸುವಾಸೆ!
ಇಂದಿಗಿಂತ ನಾಳೆ, ನಾಳೆಗಿಂತ ಮುಂದೆ
ಚಂದವೆಂಬ ಕನಸು ಬಿತ್ತಿ, ನನಸಾಗಿಸಿ
ಹೊಚ್ಚಹೊಸದರಂತೆ ಹಚ್ಚ ಹಸುರಾಗುಳಿಸಿ
ನಳನಳಿಸುವ ನಗುವಿಗೆ ಕಣ್ಕನ್ನಡಿಯಾಗುವಾಸೆ!!
-
ಆಡಿದ ಮಾತುಗಳಿಂದ ಮನದಲಿ ಮೂಡಿದ ಚಿತ್ರವದೇಕೋ ಮರೆಯಾಗಲೊಲ್ಲದು!
ಹಸಿಮನಸು ಬೆಂದು ಕಲ್ಲಾಗಿರಬೇಕು,
ಇನ್ನಳಿಸಲಾಗದು!?-