When you have a problem in having a problem, you actually have a problem.
-
ತಾಳಿಕೋ ಎಲೆ ಮರುಳೇ,
ಧಾವಂತ ಬೇಕಿಲ್ಲ, ಹುಂಬ ಹಂಬಲ ಸಲ್ಲ.
ಈ ಹೊತ್ತು ಜಾರಲಿದೆ ನೀ ಧೈರ್ಯ ತಾಳು.
ನಿನ್ನೆಯಿದ್ದಂತಿಲ್ಲ ಈ ದಿವಸ ನೀ ನೋಡು,
ನಾಳೆ ಹೊಸದಾಗಲಿದೆ ನೀ ಕೊಂಚ ತಾಳು.
ಏಳು ಬೀಳುಗಳೆಲ್ಲ ಬಲು ಸಹಜ ನಡೆವವಗೆ,
ತಾಳ್ಮೆಯಿಂದಲೇ ತಾಳು, ತಿಳಿದು ನೀ ಬಾಳು.
-
ಕವಿ ತಾ ರವಿಯಂತಿವನು,
ಅಂತರ್ಜ್ವಾಲೆಯ ಬಿಸಿಯಲಿ ಪಕ್ವವಾದವನು,
ನೋವನು ನುಂಗುತ ನಲಿವನು ಹಂಚುತ
ಇತರರ ನಗುವಲಿ ಮಗುವಾದವನು,
ತನ್ನನೇ ಮರೆಯುತ ಮರೆಯಾದವನು.
ರವಿ ಪರಿ ಕವಿಯೂ ಕಣ್ಣಾದವನು.
-
ಬದುಕು, ಪೂರ್ಣ, ಶೂನ್ಯ.
ಪದಗಳ ನಡುವೆ ಅಲ್ಪವಿರಾಮಗಳು ಇರದಿದ್ದರೆ,
ಬದುಕು ಪೂರ್ಣ ಶೂನ್ಯ.
ವಿರಾಮ ಬೇಕು, ವಿರಮಿಸಬೇಕು,
ಬದುಕಿನ ಪೂರ್ಣತೆ - ಶೂನ್ಯತೆ
ಅರಿಯಲು ವಿಶ್ರಾಂತಿ ಬೇಕು.-
The journey is from Nowhere to Now Here.
Space it right to get it right.-
ಮೊದಲು ತೊದಲು ನುಡಿಯಲುಲಿದ ಮಾತೃಭಾಷೆ ಕನ್ನಡ,
ಮಾತದಾಗಿ ಮೌನ ಮೀಟಿ ಭಾಷೆಯಾದ ಭಾವವಿದು ಕನ್ನಡ ,
ಸುಲಲಿತವಾಗಿ ನಾಲಿಗೆಯಲ್ಲಿ ನಲಿದಾಡುವ ನುಡಿ ಕನ್ನಡ,
ನುಡಿಗಳಲ್ಲೇ ರಸದೌತಣವನು ಉಣ ಬಡಿಸುವ ಸವಿ ಕನ್ನಡ.
-
ಹೃದಯ ಹೂದೋಟದಲಿ ಬಿರಿಯ ಬಯಸಿಹ ಮೊಗ್ಗುಗಳು ,
ಕಾತರದಿ ಕೌತುಕದಿ ಎನ್ನಿನಿಯನ ಬರುವಿಕೆಗೆ ಅರಳಬಯಸಿ ಕಾದಿಹವು.
ನಗೆ ಮೊಗ್ಗುಗಳು, ಮನದಾಳ ಪರಿಮಳದ ಭರಣಿ
ಸೂಸುವ ಸುಗಂಧದಲಿ ಶೃಂಗಾರ ಕಾವ್ಯವೊಂದಕೆ
ಸಾಕ್ಷಿಯಾಗುವಾಸೆಯಲಿ, ಬಿರಿಯ ಬಯಸಿಹ
ಮೊಗ್ಗುಗಳು ಕಾದಿಹವು.
ಬಂದು ಬಿಡು ಒಡೆಯಾ, ಇನ್ನೆಷ್ಟು ಕಾಯುವಿಕೆ,
ಎನ್ನೊಡಲ ವಿರಹ ಬೇಗೆ ನಗೆ ಮೊಗ್ಗುಗಳ ನಲುಗಿಸೀತು,
ಅರಳಿ ಬಿರಿಯುವ ಮುನ್ನ ಮೊಗ್ಗುಗಳ ನಗೆ ಕಮರಿಹೋದೀತು,
ಬಂದು ಬಿಡು ಒಡೆಯಾ,
ತಲ್ಲಣಿಸಿ ಕಾಯುತಿಹ ಜೀವ ತುಸು ತಂಪಾಗಲಿ,
ನಗೆ ಮೊಗ್ಗುಗಳು ಬಿರಿದು ಸುಗಂಧ ಹೊರಸೂಸಿ,
ಶೃಂಗಾರ ಕಾವ್ಯ ಕಾಲ ನಮದಾಗಲಿ,
ನಮದೆಂಬುದೊಂದಿರದೇ ರಮ್ಯತೆಯ ಭವ್ಯ
ಮೈತ್ರಿಯಲಿ ನಾನೀನು ಅಳಿವಂತೆ ಎಲ್ಲಾ ಲೀನವಾಗಲಿ.
-
ಪ್ರೀತಿಯಿರುವೆಡೆ ಭೀತಿ ಇರದು,
ಪ್ರೀತಿ ತೊರೆದರೇನೆಂಬ ಭೀತಿ,
ಪ್ರೀತಿಯಿರುವೆಡೆ ಇರದು.
ನಿಜ ಪ್ರೀತಿ ಚಿಗುರಿತೆಂದರೆ,
ಅಂಕು ಶಂಕೆ ಬಿಂಕ ಭೀತಿ ಒಂದೂ ಇರಲಾರದು.-
ಎಲ್ಲಿ ಮೌನ ಸಹ್ಯವೋ ಅಲ್ಲಿ ಸ್ನೇಹ ಸಾಧ್ಯ,
ಎಲ್ಲೆ ಮೀರಿ ಆಡಿದಂತ ಮಾತೆಲ್ಲಾ ಅಸಹ್ಯ.
ಭಾವ ಶೃತಿ ಮಿಡಿಯಬೇಕು
ಹಗುರಾಗಿಸುವ ಮೌನಕೆ,
ಮನದ ತಂತು ತುಡಿಯಬೇಕು
ತೂಕವಿರುವ ಮಾತಿಗೆ.
ಮಾತು ತೂಕ, ಮೌನ ಹಗುರ,
ಸ್ನೇಹ ಪೂರ್ಣ ಅಂತರಾಳ.
ಅಂತರಂಗ ಅತಿ ನಿರಾಳ,
ಅಂತಃ ಸ್ನೇಹ ಅತಿ ವಿರಳ.-
ತುಂಬು ಕತ್ತಲೆಯ ಗರ್ಭಕೋಶದಲಿ
ಮೂಡಿ ಬಂದ ಬೆತ್ತಲೆಯ ಭ್ರೂಣ ನಾನು,
ಮತ್ತೆ ಗೋರಿಯಲೋ,
ಉರಿದಳಿಸುವ ಚಿತೆ ಅಗ್ನಿಯಲೋ
ಬೆತ್ತಲಾಗಿ ಕತ್ತಲಲ್ಲಿ ಕರಗುವವ ನಾನು,
ನಡುವೆ ನಾಲ್ಕು ದಿನಗಳಲಿ ಬೆಳಕಾಗಿ,
ಬೆಳಕ ಹೊದ್ದು ಬಾಳುವವನು ನಾನು.
ಕತ್ತಲೆಯೂ ನನದಲ್ಲ, ಬೆಳಕೂ ನನದಲ್ಲ,
ಮತ್ತೇಕೆ ನಟ್ಟ ನಡುವಿನಲಿ
ನಾನು ನನದೆಂಬ ಹುಂಬ ಹುನ್ನಾರ?
-