ಹೇಗಿದ್ದರೇನು? ಇರದಿದ್ದರೇನು? ಜವರಾಯ ಬಂದು ಅಪ್ಪಿಕೊಳ್ಳುವನೊಂದು ದಿನ, ಆಮಿಷ ನೀಡಲು ಅವನೇನು ಭ್ರಷ್ಟಾಚಾರಿಯಲ್ಲ, ಆಸೆಗಳನ್ನು ಬಿಟ್ಟೋಗಲು ಯಾರಿಗೂ ಮನಸ್ಸಿಲ್ಲ. ಮೊದಲು ಬರಲು ಓಟವಂತೂ ಸಾಗುತ್ತಿದೆ, ಯಾರು ಯಾರಿಗೆ ಸ್ಪರ್ಧಿಯೆಂದು ತಿಳಿಯದೆ. ಸಂಪಾದಿಸು ಮನುಜ ಒಂದಿಷ್ಟು ನೆನಪುಗಳನ್ನು, ಬದುಕಿಗೊಂದು ಸುಂದರ ಬೆನ್ನುಡಿ ಬರೆದು. ಹೇಗಿದ್ದರೇನು? ಇರದಿದ್ದರೇನು?
ನನಗೇನು ಗೊತ್ತಿತ್ತು! ತುಂಟ ಹುಡುಗ ನಾನಂತೆ. ನಿನ್ನ ಸೌಂದರ್ಯ ನನ್ನ ಸೆಳೆದಿತ್ತು. ಪುಷ್ಪದ ಮೇಲೆ ನಿನಗಿತ್ತು ವ್ಯಾಮೋಹ! ಅದೋ ಸೃಷ್ಟಿ ವಿಧಿಸಿದ ನಿಯಮ. ನೀ ಮೈಮರೆತಾಗ ನಾ ನಿನ್ನ ಹಿಡಿದೆ! ನಿನ್ನ ಬಣ್ಣಗಳ ಸಾಲ ಪಡೆದಿತ್ತಂತೆ ಪ್ರಪಂಚ. ಹೇ ಚಿಟ್ಟೆ, ಹಿಡಿದು ನೋಡಿ ಪರವಶನಾಗುತ್ತಿದ್ದೆ. ಒಂದೆರಡು ಕ್ಷಣ ನಿನ್ನ ಬಂಧಿಸಿದ ಪಾಪ ನನಗೆ! ಮತ್ತೆಂದೂ ನಿನ್ನ ಬಂಧಿಸುವ ಮನಸ್ಸಿಲ್ಲ ಎನಗೆ. ಆ ಬೆರಳುಗಳಿಗಂಟಿದ ನಿನ್ನ ರೆಕ್ಕೆ ಬಣ್ಣಗಳೇ, ಇಂದು ಈ ಪದಗಳಿಗೆ ಸ್ಫೂರ್ತಿಯಾಗಿದೆ. ಕ್ಷಮಿಸಿ ಬಿಡಿ ಒಮ್ಮೆ ಈ ತುಂಟಾಟದ ಪೋರನ!